
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣದ ಆರೋಪಿ ಜಸೀರ್ ಬಿಲಾಲ್ ವಾನಿಯ ಎನ್ಐಎ ಕಸ್ಟಡಿ ಅವಧಿಯನ್ನು ಏಳು ದಿನಗಳವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಈ ಹಿಂದೆ ವಿಧಿಸಲಾಗಿದ್ದ 10 ದಿನಗಳವರೆಗಿನ ಕಸ್ಟಡಿ ಅವಧಿ ಗುರುವಾರ ಮುಕ್ತಾಯವಾದ ಕಾರಣ ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಜಸೀರ್, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನ ಕಾಜಿಗುಂಡ ನಿವಾಸಿ. ಭಯೋತ್ಪಾದಕ ದಾಳಿ ನಡೆಸಲು ತಾಂತ್ರಿಕ ನೆರವು ನೀಡಿದ ಆರೋಪ ಈತನ ಮೇಲಿದೆ ಎಂದು ಎನ್ಐಎ ತಿಳಿಸಿದೆ. ಈತನನ್ನು ಎನ್ಐಎ ಅಧಿಕಾರಿಗಳು ನವೆಂಬರ್ 17ರಂದು ಬಂಧಿಸಿದ್ದರು.
ಉಗ್ರ ಚಟುವಟಿಕೆ: ಯುವಕ ಬಂಧನ ಜಮ್ಮು (ಪಿಟಿಐ): ಭಯೋತ್ಪಾದನೆ ಸಂಬಂಧಿ ಪ್ರಕರಣವೊಂದರಲ್ಲಿ ಪ್ರಮುಖ ಶಂಕಿತ ಎನ್ನಲಾದ 19 ವರ್ಷದ ಯುವಕನನ್ನು ಜಮ್ಮುವಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ರಿಯಾಸಿ ಜಿಲ್ಲೆಯವನಾದ ಯುವಕ ಪ್ರಸ್ತುತ ಜಮ್ಮುವಿನ ಬಠಿಂಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ. ಈತ ಭಯೋತ್ಪಾದಕ ದಾಳಿಯೊಂದಕ್ಕೆ ಯೋಜಿಸಿದ್ದ. ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 113 (3) (ಭಯೋತ್ಪಾದಕ ಚಟುವಟಿಕೆ) ಅಡಿ ಬಹು ಫೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವಕ್ತಾರರೊಬ್ಬರು ಹೇಳಿದ್ದಾರೆ. ಈ ಯುವಕನು ಪಾಕಿಸ್ತಾನ ಮತ್ತು ಇತರೆ ವಿದೇಶಿ ಮೊಬೈಲ್ ಸಂಖ್ಯೆಗಳೊಂದಿಗೆ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನ ಬಳಿಯಿದ್ದ ಡಿಜಿಟಲ್ ಡಿವೈಸ್ಗಳನ್ನು ವಶಕ್ಕೆ ಪಡೆದು ವಿಶ್ಲೇಷಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.