ADVERTISEMENT

ಕೆಂಪುಕೋಟೆ ಹಿಂಸಾಚಾರ: ನಟ ದೀಪ್ ಸಿಧು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ

ಪಿಟಿಐ
Published 23 ಫೆಬ್ರುವರಿ 2021, 14:27 IST
Last Updated 23 ಫೆಬ್ರುವರಿ 2021, 14:27 IST
ದೀಪ್ ಸಿಧು
ದೀಪ್ ಸಿಧು   

ನವದೆಹಲಿ: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಗಣರಾಜ್ಯೋತ್ಸವದಂದುನಡೆಸಿದ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ಕೆಂಪು ಕೋಟೆಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನಟ-ಕಾರ್ಯಕರ್ತ ದೀಪ್ ಸಿಧು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

7 ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ ಸಿಧು ಅವರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ಜೀತ್ ಕೌರ್ ಅವರ ಮುಂದೆ ಹಾಜರುಪಡಿಸಲಾಯಿತು. ಸದ್ಯ ತಿಹಾರ್ ಜೈಲಿನಲ್ಲಿರುವ ದೀಪ್ ಸಿಧು ಅವರನ್ನು ಅಲ್ಲಿಂದಲೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

ಕೆಂಪು ಕೋಟೆಯಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಮುಖ್ಯ ಪ್ರಚೋದಕರಲ್ಲಿ ಒಬ್ಬರು ಎಂದು ಪೊಲೀಸರು ಆರೋಪಿಸಿದ ನಂತರ, ನ್ಯಾಯಾಲಯವು ಫೆ. 9ರಂದು ಏಳು ದಿನಗಳ ಕಾಲ ಸಿಧುರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು. ಬಳಿಕ ಫೆಬ್ರವರಿ 16ರಂದು ಅವರ ಬಂಧನವನ್ನು ಏಳು ದಿನಗಳ ವರೆಗೆ ವಿಸ್ತರಿಸಲಾಯಿತು.
ಘಟನೆ ನಡೆದ ಸ್ಥಳದಲ್ಲಿ ಸಿಧು ಹಾಜರಿದ್ದರು ಎಂದು ಹೇಳಬಹುದಾದ ವಿಡಿಯೊಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

'ದೀಪ್ ಸಿಧು ಗುಂಪನ್ನು ಪ್ರಚೋದಿಸುತ್ತಿದ್ದನು. ಅವರು ಪ್ರಮುಖ ದಂಗೆಕೋರರಲ್ಲಿ ಒಬ್ಬರು. ಇತರೆ ಸಂಚುಕೋರರನ್ನು ಗುರುತಿಸಲು ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹುಡುಕಬೇಕಾಗಿದೆ. ಅವರ ಶಾಶ್ವತ ವಿಳಾಸವನ್ನು ನಾಗ್ಪುರ ಎಂದು ನೀಡಲಾಗಿದೆ. ಆದರೆ ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ಪಂಜಾಬ್ ಮತ್ತು ಹರಿಯಾಣದಲ್ಲಿ ಹಲವಾರು ಸ್ಥಳಗಳಿಗೆ ಭೇಟಿ ನೀಡಬೇಕಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

'ಕೆಂಪು ಕೋಟೆಯಲ್ಲಿ ಧ್ವಜವನ್ನು ಹಾರಿಸಿದ ವ್ಯಕ್ತಿಯೊಂದಿಗೆ ಹೊರಬಂಧ ಸಿಧು, ಆತನನ್ನು ಅಭಿನಂದಿಸುತ್ತಾರೆ. ಅಲ್ಲಿಂದ ಅವರು ಹೊರಗೆ ಬಂದು ಜೋರಾಗಿ ಭಾಷಣ ಮಾಡಿದರು. ಅಲ್ಲಿದ್ದವರನ್ನು ಕೆರಳಿಸಿದರು. ಅವರು ಮುಖ್ಯ ಪ್ರಚೋದಕರಾಗಿದ್ದರು. ಹಿಂಸಾಚಾರದಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ' ಎಂದು ಪೊಲೀಸರು ಆರೋಪಿಸಿದ್ದಾರೆ.

ಗಲಭೆ (147 ಮತ್ತು 148), ಕಾನೂನುಬಾಹಿರ ಸಭೆ (149), ಕೊಲೆ ಯತ್ನ (120-ಬಿ), ಕ್ರಿಮಿನಲ್ ಪಿತೂರಿ (120-ಬಿ), ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ಅಥವಾ ಅಡ್ಡಿಪಡಿಸುವುದು (152), ಡಕಾಯಿತಿ (395), ಅಪರಾಧಿ ನರಹತ್ಯೆ (308) ಮತ್ತು ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ (188) ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳ ಅಡಿಯಲ್ಲಿ ಸಿಧು ಅವರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.