ರಾಜ್ ಠಾಕ್ರೆ
–ಪಿಟಿಐ ಚಿತ್ರ
ಮುಂಬೈ: ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಜನರು ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
‘ಆಪ್ತರೊಬ್ಬರು ಅಲ್ಲಿಂದ ತಂದಿದ್ದ ಗಂಗಾಜಲವನ್ನು ಮುಟ್ಟಿ ನಾನು ನೋಡಲು ನಿರಾಕರಿಸಿದೆ’ ಎಂದು ಹೇಳಿದ್ದಾರೆ.
ಪುಣೆಯ ಪಿಂಪ್ರಿ– ಚಿಂಚವಾಡ್ನಲ್ಲಿ ಏರ್ಪಡಿಸಿದ್ದ ಪಕ್ಷದ 19 ವರ್ಷಾಚರಣೆಯಲ್ಲಿ ಮಾತನಾಡಿದ ಅವರು, ‘ಎಂಎನ್ಎಸ್ ಪಕ್ಷದ ನಾಯಕ ಬಾಲ ನಂದಗಾಂವ್ಕರ್ ನನಗೆ ಗಂಗಾಜಲವನ್ನು ತಂದುಕೊಟ್ಟಿದ್ದರು. ಅದನ್ನು ನಾನು ಮುಟ್ಟಿಯೂ ನೋಡಲಿಲ್ಲ. ಜನರು ಮೂಢನಂಬಿಕೆ ಬಗ್ಗೆ ಎಚ್ಚರದಿಂದ ಇರಬೇಕು. ನಂಬಿಕೆ ಹಾಗೂ ಮೂಢನಂಬಿಕೆಯ ವ್ಯತ್ಯಾಸವನ್ನು ತಿಳಿದಿರಬೇಕು’ ಎಂದು ಕರೆ ನೀಡಿದರು.
‘ಗಂಗಾ ಜಲ ತಂದುಕೊಟ್ಟು ಕುಡಿಯಲು ಹೇಳಿದರು. ಆಗುವುದಿಲ್ಲ ಎಂದು ತಿಳಿಸಿದೆ. ಜನರು ಅದೇ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಆ ನೀರನ್ನು ಯಾರು ಕುಡಿಯುತ್ತಾರೆ' ಎಂದು ಪ್ರಶ್ನಿಸಿದರು.
‘ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಿಂದಲೂ ಗಂಗಾ ನದಿ ಸ್ವಚ್ಛತೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೂ ಸ್ವಚ್ಛವಾಗಿಲ್ಲ. ನಾವು ಅದನ್ನು ಗಂಗಾ ಮಾತೆ ಎಂದು ಕರೆಯುತ್ತೇವೆ. ಆದರೆ, ದೇಶದ ಒಂದೇ ಒಂದು ನದಿಯೂ ಕೂಡ ಸ್ವಚ್ಛವಾಗಿಲ್ಲ, ವಿದೇಶಗಳಲ್ಲಿ ನದಿಗಳು ಸ್ವಚ್ಛವಾಗಿರುವ ಜೊತೆಗೆ ಅದರಲ್ಲಿನ ನೀರು ಸ್ಪಟಿಕದಷ್ಟು ಸ್ಪಷ್ಟವಾಗಿರುತ್ತದೆ’ ಎಂದರು.
ಈ ಹೇಳಿಕೆಗೆ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಹಾಗೂ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಜನರಿಗೆ ನಂಬಿಕೆಯಿರುತ್ತದೆ, ಯಾರೂ ಕೂಡ ಅದನ್ನು ಘಾಸಿಗೊಳಿಸಬಾರದು’ ಎಂದು ಬಿಜೆಪಿ ನಾಯಕ ಹಾಗೂ ಸಚಿವ ಗಿರೀಶ್ ಮಹಾಜನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.