ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದು ‘ಹಿಂಜರಿಕೆಯ ನಡೆ’ ಎಂದು ಕೃಷಿ ಕಾಯ್ದೆಗಳ ಪರಾಮರ್ಶೆಗೆ ಸುಪ್ರೀಂ ಕೋರ್ಟ್ ನೇಮಿಸಿದ್ದ ರೈತ ಸಮಿತಿಯ ಸದಸ್ಯ ಅನಿಲ್ ಘನವತ್ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.
‘ರೈತರ ಅಭ್ಯುದಯದ ಬದಲು,ರಾಜಕೀಯವನ್ನು ಆಯ್ಕೆ ಮಾಡಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರದ್ದು ತೀರಾ ಪ್ರತಿಗಾಮಿ ನಡೆಯಾಗಿದೆ,’ ಎಂದು ಘನವತ್ ಟೀಕಿಸಿದ್ದಾರೆ.
‘ಮೂರು ಕೃಷಿ ಕಾನೂನುಗಳಿಗೆ ಹಲವು ತಿದ್ದುಪಡಿಗಳನ್ನು ನಮ್ಮ ಸಮಿತಿ ಪಟ್ಟಿ ಮಾಡಿತ್ತು. ಪರಿಹಾರಗಳನ್ನು ಸೂಚಿಸಿತ್ತು. ಬಿಕ್ಕಟ್ಟನ್ನು ಪರಿಹರಿಸಲು ನಮ್ಮ ಸಲಹೆಗಳನ್ನು ಪರಿಗಣಿಸುವ ಬದಲು, ಮೋದಿ ಮತ್ತು ಬಿಜೆಪಿ ಹೆಜ್ಜೆ ಹಿಂದಿಡಲು ನಿರ್ಧರಿಸಿದೆ. ಅವರು ಕೇವಲ ಚುನಾವಣೆಯಲ್ಲಿ ಗೆಲ್ಲಲು ಬಯಸುತ್ತಾರೆಯೇ ಹೊರತು ಬೇರೇನೂ ಇಲ್ಲ, ”ಎಂದು ಅವರು ಹೇಳಿದರು.
ಇಂದು (ಶುಕ್ರವಾರ) ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು. ಸುಮಾರು ಒಂದು ವರ್ಷದಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದು, ಕೊನೆಗೂ ಕೇಂದ್ರ ಸರ್ಕಾರವು ಕಾಯ್ದೆಗಳ ರದ್ದತಿ ನಿರ್ಧಾರ ಕೈಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.