ದೆಹಲಿ ಸಿಎಂ ರೇಖಾ ಗುಪ್ತಾ
ಪಿಟಿಐ ಚಿತ್ರ
ನವದೆಹಲಿ: ‘ಜನ ಸಂವಾದ’ ಕಾರ್ಯಕ್ರಮದಲ್ಲಿ ನಡೆದ ಹಲ್ಲೆಯಿಂದಾಗಿ ಗಾಯಗೊಂಡಿದ್ದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಚೇತರಿಸಿಕೊಂಡಿದ್ದು, ಎರಡು ದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ‘ನಾನು ಎಂದಿಗೂ ಹೆದರುವುದೂ ಇಲ್ಲ, ಸೋಲುವುದೂ ಇಲ್ಲ. ದೆಹಲಿಯ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದು ಹೇಳಿದ್ದಾರೆ.
ನಗರದ ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಿಮ್ಮ ಮುಖ್ಯಮಂತ್ರಿ ಹೆದರುವುದೂ ಇಲ್ಲ, ಬಳಲಿಕೆ ಮತ್ತು ಸೋಲಿನಿಂದ ಹಿಂದೆ ಸರಿಯುವುದೂ ಇಲ್ಲ. ದೆಹಲಿಗೆ ಸಿಗಬೇಕಾದ ಹಕ್ಕು ಸಿಗುವವರೆಗೂ ಹೋರಾಡುತ್ತೇನೆ, ನಿಮ್ಮೊಂದಿಗಿರುತ್ತೇನೆ. ಇದು ನನ್ನ ದೃಢನಿಶ್ಚಯ’ ಎಂದು ಹೇಳಿದ್ದಾರೆ.
‘ಜನ ಸಂವಾದ’ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ರೇಖಾ ಅವರ ಮೇಲೆ ಹಲ್ಲೆ ನಡೆಸಿದ್ದ. ಇದರಿಂದಾಗಿ ರೇಖಾ ಗುಪ್ತಾ ಅವರ ಕೈ, ಭುಜ ಮತ್ತು ತಲೆಗೆ ಪೆಟ್ಟಾಗಿತ್ತು. ಆರೋಪಿಯನ್ನು ಗುಜರಾತ್ನ ರಾಜ್ಕೋಟ್ ನಿವಾಸಿ ಸಕರಿಯಾ ರಾಜೇಶ್ಭಾಯಿ ಖಿಮ್ಜಿಭಾಯಿ ಎಂದು ಗುರುತಿಸಲಾಗಿದೆ. ಹತ್ಯೆ ಯತ್ನ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.