ನವದೆಹಲಿ: ಆಯಾ ಸಮುದಾಯಗಳ ಜನಸಂಖ್ಯೆ ಆಧರಿಸಿ ಅಲ್ಪಸಂಖ್ಯಾತರು ಯಾರು ಎನ್ನುವುದನ್ನು ರಾಜ್ಯವಾರು ಘೋಷಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
‘ಭಾಷೆಗಳು ರಾಜ್ಯಕ್ಕೆ ಸೀಮಿತವಾಗಿವೆ. ಭಾಷೆ ಆಧಾರದ ಮೇಲೆಯೇ ರಾಜ್ಯಗಳನ್ನು ಪುನರ್ರಚಿಸಲಾಗಿದೆ. ಆದರೆ, ಧರ್ಮದ ವಿಷಯದಲ್ಲಿ ಆ ರೀತಿ ಮಾಡಿಲ್ಲ. ಇದು ದೇಶದಾದ್ಯಂತ ವಿಸ್ತಾರವಾಗಿದೆ. ಇಡೀ ದೇಶದಲ್ಲಿನ ಜನಸಂಖ್ಯೆಯನ್ನು ಪರಿಗಣಿಸಿ ಅಲ್ಪಸಂಖ್ಯಾತರು ಯಾರು ಎನ್ನುವುದನ್ನು ನಿರ್ಧರಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ ನೇತೃತ್ವದ ಪೀಠವು ಅಭಿಪ್ರಾಯಪಟ್ಟಿದೆ.
‘2011ರ ಜನಗಣತಿ ಅನ್ವಯ ಲಕ್ಷದ್ವೀಪದಲ್ಲಿ ಶೇ 2.5, ಮಿಜೋರಾಂನಲ್ಲಿ ಶೇ 2.75, ನಾಗಾಲ್ಯಾಂಡ್ನಲ್ಲಿ ಶೇ 8.75, ಮೇಘಾಲಯ ದಲ್ಲಿ ಶೇ 11.53, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 28.44, ಅರುಣಾಚಲ ಪ್ರದೇಶದಲ್ಲಿ ಶೇ 29, ಮಣಿಪುರದಲ್ಲಿ ಶೇ 31.39 ಮತ್ತು ಪಂಜಾಬ್ನಲ್ಲಿ ಶೇ 38.40ರಷ್ಟು ಅಲ್ಪಸಂಖ್ಯಾತರಿದ್ದಾರೆ’ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮೋಹನ್ ಪರಸರನ್ ವಿವರಿಸಿದರು.
ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕೆ. ಉಪಾಧ್ಯಾಯ ಅವರು ಈ ವಿಷಯದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.