ಭೋಪಾಲ್: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಕುರಿತು ಅಮೆರಿಕದಲ್ಲಿ ಹೇಳಿಕೆ ನೀಡುವ ಮೂಲಕ ದೇಶವನ್ನು ಅವಮಾನಿಸಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ರಾಹುಲ್ ಗಾಂಧಿ ಅವರು ವಿದೇಶಿ ನೆಲದಲ್ಲಿ ದೇಶದ ಮಾನ ಹಾಳು ಮಾಡಿದ್ದಾರೆ. ಕಳೆದ ಬಾರಿಯು ಅವರು ಹೀಗೆ ಮಾಡಿದ್ದರು. ಈ ಬಾರಿ ಅವರು ದೇಶಕ್ಕೆ ಅವಮಾನ ಮಾಡಬಾರದು, ಭಗವಾನ್ ಮಹಾಕಾಲ ಅವರಿಗೆ ಸರಿಯಾದ ಬುದ್ಧಿ ನೀಡಲಿ ಎಂದು ನಾನು ನಿನ್ನೆ ಹೇಳಿದ್ದೆ’ ಎಂದು ಅವರು ಹೇಳಿದ್ದಾರೆ.
ಬೇರೆ ಯಾವುದೇ ದೇಶದ ನಾಯಕರು ತಮ್ಮ ದೇಶದ ಕುರಿತು ವಿದೇಶಿ ನೆಲದಲ್ಲಿ ಈ ರೀತಿಯ ವಾತಾವರಣವನ್ನು ಸೃಷ್ಟಿಸುವುದಿಲ್ಲ. ಇದು ಕಾಂಗ್ರೆಸ್ನ ಗುಣವಾಗಿದೆ. ಕಾಂಗ್ರೆಸ್ ತಮ್ಮ ನಾಯಕನನ್ನು ನಿಯಂತ್ರಿಸಬೇಕಾಗಿದೆ. ನಾವು ದೇಶದ ಮಾನ ಹಾಳು ಮಾಡಬಾರದು ಮತ್ತು ಅದರ ನಾಗರಿಕರನ್ನು ದೂಷಿಸಬಾರದು ಎಂದು ಮೋಹನ್ ತಿಳಿಸಿದ್ದಾರೆ.
ಭಾನುವಾರ ಅಮೆರಿಕದ ಬೋಸ್ಟನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಚುನಾವಣಾ ಆಯೋಗವು ನಿಯಮಗಳಲ್ಲಿ ರಾಜಿ ಮಾಡಿಕೊಂಡಿದೆ ಮತ್ತು ವ್ಯವಸ್ಥೆಯಲ್ಲಿ ಏನೋ ತಪ್ಪಾಗಿದೆ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.