ಅಹಮದಾಬಾದ್: ವಾಸ್ತುಶಿಲ್ಪಿಗಳಿಗೆ ನೀಡಲಾಗುವ ಜಗತ್ತಿನ ಅತ್ಯುನ್ನತ ‘ಪ್ರಿಟ್ಸ್ಗರ್ ಆರ್ಕಿಟೆಕ್ಚರ್ ಪ್ರಶಸ್ತಿ’ಯನ್ನು ಪಡೆದ ಭಾರತದ ಮೊದಲಿಗ, ಪ್ರದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಬಾಲಕೃಷ್ಣ ದೋಶಿ (95) ಅವರು ಮಂಗಳವಾರ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.
ಬೆಂಗಳೂರಿನ ಐಐಎಂ ಕಟ್ಟಡ, ಅಹಮದಾಬಾದ್ನಲ್ಲಿರುವ ಅಮ್ದಾವಾದ್ ನಿ ಗುಫಾ, ಇಂದೋರ್ನ ಕಡಿಮೆ ವೆಚ್ಚದ ಅರಣ್ಯ ಸಿಬ್ಬಂದಿ ಮನೆ ಯೋಜನೆ ಸಹಿತ ಹಲವಾರು ವಿಶೇಷ ವಿನ್ಯಾಸದ ಕಟ್ಟಡಗಳನ್ನು ದೋಶಿ ಅವರು ರೂಪಿಸಿದ್ದರು.
ಜಗತ್ತಿನ ಆಧುನಿಕ ವಾಸ್ತುಶಿಲ್ಪದ ಪ್ರಮುಖರಾದ ಪ್ಯಾರಿಸ್ನ ಲು ಕೊಬ್ರಿಜಿಯರ್ ಅವರೊಂದಿಗೂ ದೋಶಿ ಅವರು ಕೆಲಸ ಮಾಡಿದ್ದಾರೆ.
‘ಅವರಷ್ಟು ಚೆನ್ನಾಗಿ ಬದಕಿದವರು ಯಾರೂ ಇರಲಿಕ್ಕಿಲ್ಲ. ಯಾವಾಗಲೂ ‘ಆನಂದ್ ಕರೋ’ (ಜೀವನದಲ್ಲಿ ಸದಾ ಆನಂದವಾಗಿರಿ) ಎನ್ನುತ್ತಿದ್ದರು. ಉತ್ತಮ ಗಂಡ, ಅಪ್ಪ, ಅಜ್ಜ, ಮುತ್ತಜ್ಜರಾಗಿದ್ದ ಬಾಲಕೃಷ್ಣ ದೋಶಿ ಅವರು ನಿಧನರಾದರು ಎಂದು ತಿಳಿಸಲು ದುಃಖಿತರಾಗಿದ್ದೇವೆ’ ಎಂದು ದೋಶಿ ಅವರ ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವು ಗಣ್ಯರು ದೋಶಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.