ADVERTISEMENT

ದೆಹಲಿ ಪೊಲೀಸ್ ಇಲಾಖೆಯಲ್ಲಿ ನಿವೃತ್ತ ಅಗ್ನಿವೀರರಿಗೆ ಶೇ.20ರಷ್ಟು ಮೀಸಲಾತಿ

ಪಿಟಿಐ
Published 23 ಫೆಬ್ರುವರಿ 2026, 10:19 IST
Last Updated 23 ಫೆಬ್ರುವರಿ 2026, 10:19 IST
   

ನವದೆಹಲಿ: ದೆಹಲಿ ಪೊಲೀಸ್ ಇಲಾಖೆಯಲ್ಲಿನ ಪುರುಷ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯಲ್ಲಿ ನಿವೃತ್ತ ಅಗ್ನಿವೀರರಿಗೆ ಶೇ.20ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸೋಮವಾರ ಹೇಳಿದ್ದಾರೆ.

ನಿವೃತ್ತ ಅಗ್ನಿವೀರರಿಗೆ ಪೊಲೀಸ್ ನೇಮಕಾತಿಯ ವೇಳೆ ದೈಹಿಕ ಪರೀಕ್ಷೆಯಿಂದ ಕೂಡ ವಿನಾಯಿತಿ ನೀಡಲಾಗುತ್ತದೆ. ಅವರಿಗೆ ವಯಸ್ಸಿನ ಮಿತಿಯನ್ನು 3 ವರ್ಷ ಸಡಿಲಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಿವೃತ್ತ ಅಗ್ನಿವೀರರಿಗೆ ಅವಕಾಶ ನೀಡುವ ಉದ್ದೇಶದಿಂದ ದೆಹಲಿ ಪೊಲೀಸ್ ನೇಮಕಾತಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಅದಕ್ಕೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ದೊಡ್ಡ ಸಂಖ್ಯೆಯ ನಿವೃತ್ತ ಅಗ್ನಿವೀರರು, ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಹರಿದ್ದಾರೆ. ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ವಯಸ್ಸಿನ ಮಿತಿಯನ್ನು 5 ವರ್ಷ ಸಡಿಲಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೇನೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಗ್ನಿವೀರರಿಗೆ ದೇಶ ಸೇವೆಯ ನಂತರ ಸಮಾಜ ಸೇವೆ ಮಾಡಲು ಅವಕಾಶ ನೀಡಲಾಗಿದೆ. ಅವರ ಅನುಭವ ಮತ್ತು ಪೂರ್ವ ತರಬೇತಿಯು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ದೆಹಲಿ ಪೊಲೀಸ್ ಇಲಾಖೆಯಲ್ಲಿ ಒಟ್ಟು 42,451 ಹುದ್ದೆಗಳು ಖಾಲಿಯಿವೆ. ನೇಮಕಾತಿಗೆ 18 ರಿಂದ 25 ವರ್ಷಗಳ ವಯಸ್ಸಿನ ಮಿತಿಯಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಸೇನೆಯಲ್ಲಿ ಯುವಕರಿಗೆ ಅವಕಾಶ ನೀಡುವ ಉದ್ದೇಶದಿಂದ 2022ರಲ್ಲಿ ಅಗ್ನಿವೀರ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.