
ಹೈದರಾಬಾದ್: ಹಿಂದಿನ ಬಿಆರ್ಎಸ್ ಪಕ್ಷದ ಆಡಳಿತವು ಫೋನ್ ಸಂಭಾಷಣೆಯ ಕದ್ದಾಲಿಕೆ ಮೂಲಕ ಉದ್ಯಮಿಗಳಿಗೆ ಬ್ಲ್ಯಾಕ್ಮೇಲ್ ಮಾಡಿ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ದೂರಿದ್ದಾರೆ.
ಫೆ.11ರಂದು ನಡೆಯಲಿರುವ ಮುನ್ಸಿಪಲ್ ಚುನಾವಣೆ ಅಂಗವಾಗಿ ಜಯಶಂಕರ್ ಭೂಪಲಪಲ್ಲಿ ಜಿಲ್ಲೆಯ ಚೆಲ್ಪುರದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರೆಡ್ಡಿ, ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷವನ್ನು ‘ಬ್ಲ್ಯಾಕ್ಮೇಲ್ ರಾಜಕೀಯ ಸಮಿತಿ’ ಎಂದು ಲೇವಡಿ ಮಾಡಿದರು.
‘ಹಿಂದಿನ ಆಡಳಿತವು ಫೋನ್ ಕದ್ದಾಲಿಕೆಯಲ್ಲೇ ನಿರತವಾಗಿತ್ತು. ವಿರೋಧ ಪಕ್ಷದ ನಾಯಕರು, ಹೈಕೋರ್ಟ್ ನ್ಯಾಯಮೂರ್ತಿಗಳು, ಪತ್ರಕರ್ತರನ್ನು ಬಿಟ್ಟಿರಲಿಲ್ಲ. ಗಂಡ–ಹೆಂಡತಿಯ ಖಾಸಗಿ ಸಂಭಾಷಣೆಗಳನ್ನು ಕದ್ದಾಲಿಸಿದ್ದರು. ಈ ಭೂಮಿ ಮೇಲೆ ಇದಕ್ಕಿಂತ ಇನ್ನೇನಾದರೂ ಘೋರ ತಪ್ಪು ಇದೆಯಾ? ಅವರಿಗಿಂತ ದೊಡ್ಡ ಪಾಪಿ ಯಾರಿದ್ದಾರೆ?’ ಎಂದು ರೆಡ್ಡಿ ವಾಗ್ದಾಳಿ ನಡೆಸಿದರು.
ತೆಲಂಗಾಣ ಬಿಜೆಪಿ ಸಂಸದ ಕೊಂಡಾ ವಿಶ್ವೇಶ್ವರ ರೆಡ್ಡಿ ಸಹ ತಮ್ಮ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.