ADVERTISEMENT

ಆರ್‌ಎಸ್‌ಎಸ್‌ ಕಾರ್ಯಚಟುವಟಿಕೆಗಳ ಕುರಿತು ವಿಮರ್ಶೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:25 IST
Last Updated 23 ಅಕ್ಟೋಬರ್ 2024, 16:25 IST
<div class="paragraphs"><p>ಪ್ರಜಾವಾಣಿ ಚಿತ್ರ</p></div>
   

ಪ್ರಜಾವಾಣಿ ಚಿತ್ರ

ನವದೆಹಲಿ: ಮಥುರಾದಲ್ಲಿ ಈ ವಾರಾಂತ್ಯಕ್ಕೆ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಕುರಿತು ವಿಚಾರ ವಿಮರ್ಶೆ ನಡೆಸಲು ನಿರ್ಧರಿಸಲಾಗಿದೆ.

2025ಕ್ಕೆ ಆರ್‌ಎಸ್‌ಎಸ್‌ ನೂರು ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ 2025ರ ವಿಜಯದಶಮಿಯಂದು ನಡೆಯುವ ಕಾರ್ಯಕ್ರಮದ ರೂಪುರೇಷೆಯನ್ನು ಸಂಘವು ಸಭೆಯಲ್ಲಿ ನಿರ್ಧರಿಸಲಿದೆ.

ADVERTISEMENT

ಈ ಬಗ್ಗೆ ಆರ್‌ಎಸ್‌ಎಸ್‌ನ ಮಾಧ್ಯಮ ಘಟಕದ ಮುಖ್ಯಸ್ಥ ಸುನಿಲ್‌ ಅಂಬೇಕರ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ‘ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗವಹಿಸಲಿದ್ದು, ಸಂಘದ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸುವ ಕುರಿತ ಯೋಜನೆ ರೂಪಿಸಲಾಗಿದ್ದು, ಈ ಕುರಿತು ವಿಮರ್ಶೆ ನಡೆಸಲಾಗುವುದು’ ಎಂದು ಸುನಿಲ್‌ ಮಾಹಿತಿ ನೀಡಿದರು.

‘1925ರಲ್ಲಿ ಆರಂಭಗೊಂಡ ಆರ್‌ಎಸ್‌ಎಸ್‌, ‘ವ್ಯಕ್ತಿ ನಿರ್ಮಾಣ’ದಿಂದ ಹಿಡಿದು ‘ರಾಷ್ಟ್ರ ನಿರ್ಮಾಣ’ದ ವರೆಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ಕೆ 2025ರಲ್ಲಿ ನೂರು ವರ್ಷ ತುಂಬಲಿದ್ದು, ಪ್ರಸ್ತುತ ಆರ್‌ಎಸ್‌ಎಸ್‌ ತನ್ನ ಕಾರ್ಯವ್ಯಾಪ್ತಿಯನ್ನು ಇಡೀ ರಾಷ್ಟ್ರಕ್ಕೇ ವಿಸ್ತರಿಸಿಕೊಂಡಿದೆ’ ಎಂದರು.

‘ಸ್ವಾಮಿ ದಯಾನಂದ ಸರಸ್ವತಿ, ಭಗವಾನ್‌ ಬಿರ್ಸಾ ಮುಂಡಾ, ಅಹಿಲ್ಯಾಭಾಯಿ ಹೋಲ್ಕರ್‌, ರಾಣಿ ದುರ್ಗಾವತಿ ಹಾಗೂ ಸಂತ ಅನುಕುಲ್‌ ಚಂದ್ರ ಠಾಕೂರ್‌– ಈ ಐವರು ಸಂತರ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವುದು ಹೇಗೆ ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ವಿವರಿಸಿದರು.

‘ಆರ್‌ಎಸ್‌ಎಸ್‌ನಲ್ಲಿ ಮೂರು ವರ್ಷ ಪೂರೈಸಿದ 40 ವರ್ಷ ಮೇಲ್ಪಟ್ಟ ಕಾರ್ಯಕರ್ತರಿಗೆ ಇದೇ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.