ADVERTISEMENT

ರಿಯಾ ಹಾಗೂ ಆಕೆ ಕುಟುಂಬದ ಕಿರುಕುಳ ಸುಶಾಂತ್‌ ಸಾವಿಗೆ ಕಾರಣ ಎಂದ ತಂದೆ

ಸುಪ್ರೀಂ ಕೋರ್ಟ್‌ಗೆ ಸುಶಾಂತ್‌ ತಂದೆ ಕೆ.ಕೆ.ಸಿಂಗ್‌ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 19:17 IST
Last Updated 8 ಆಗಸ್ಟ್ 2020, 19:17 IST
ಸುಶಾಂತ್‌ ಸಿಂಗ್‌ ರಜಪೂತ್‌
ಸುಶಾಂತ್‌ ಸಿಂಗ್‌ ರಜಪೂತ್‌   

ನವದೆಹಲಿ: ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ‘ನಿರಂತರ ಕ್ರಿಮಿನಲ್‌ ಕ್ರಮಗಳೇ’ ನನ್ನ ಏಕೈಕ ಮಗ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಕಾರಣ’’ ಎಂದು ಸುಶಾಂತ್‌ ತಂದೆ ಕೆ.ಕೆ.ಸಿಂಗ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಜೊತೆಗೆ, ಸುಶಾಂತ್‌ ಅಸಹಜ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಆರಂಭದಿಂದಲೇ ತನಿಖೆಯ ದಿಕ್ಕುತಪ್ಪಿಸುತ್ತಿದ್ದಾರೆ ಎಂದೂ ಕೆ.ಕೆ.ಸಿಂಗ್ ಆರೋಪಿಸಿದ್ದಾರೆ. ತನ್ನ ವಿರುದ್ಧ ದಾಖಲಾಗಿರುವ ದೂರನ್ನು ಪಟ್ನಾದಿಂದ ಮುಂಬೈಗೆ ವರ್ಗಾಯಿಸಬೇಕು ಎಂದು ಕೋರಿ ರಿಯಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೆ.ಕೆ.ಸಿಂಗ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆ.ಕೆ.ಸಿಂಗ್‌, ‘ಈ ಪ್ರಕರಣದ ತನಿಖೆಯನ್ನು ಬಿಹಾರ ಸರ್ಕಾರದ ಶಿಫಾರಸಿನ ಮೇರೆಗೆ ಸಿಬಿಐಗೆ ನೀಡಿದ ಬಳಿಕ, ಈ ವಿಷಯ ಸಂಶಯದೃಷ್ಟಿಯಿಂದ ಕೂಡಿದೆ. ತನಿಖೆ ಸಂದರ್ಭದಲ್ಲಿ ಯಾವುದೇ ಪ್ರಕರಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಕಳೆದೊಂದು ವರ್ಷದಿಂದ ರಿಯಾ ಹಾಗೂ ಆಕೆಯ ಕುಟುಂಬ ನೀಡಿದ ಕಿರುಕುಳವೇ ಸುಶಾಂತ್‌ ಸಾವಿಗೆ ಕಾರಣ ಎನ್ನುವುದಕ್ಕೆ ಸಾಕಷ್ಟು ಸಾಕ್ಷ್ಯವಿದೆ’ ಎಂದು ವಿಸ್ತೃತವಾದ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

ಪ್ರಕರಣವನ್ನು ರಾಜಕೀಯಗೊಳಿಸುವ ಹೀನ ಕೃತ್ಯಕ್ಕೂ ಮಹಾರಾಷ್ಟ್ರ ಸರ್ಕಾರ ಪ್ರಯತ್ನ ನಡೆಸಿತ್ತು ಎಂದು ಆರೋಪಿಸಿದ ಸಿಂಗ್‌, ತನಿಖೆಗಾಗಿ ಆಗಮಿಸಿದ ಪಟ್ನಾ ಪೊಲೀಸರನ್ನೂ ಕ್ವಾರಂಟೈನ್‌ನಲ್ಲಿ ಇರಿಸಿದೆ. ತನಗೆ ಜೀವಬೆದರಿಕೆ ಇದೆ ಎಂದು 2020 ಫೆಬ್ರುವರಿಯಲ್ಲಿ ಮುಂಬೈ ಪೊಲೀಸರ ಬಳಿ ಸುಶಾಂತ್‌ ಹೇಳಿಕೊಂಡಿದ್ದರೂ, ಯಾವ ಕ್ರಮವನ್ನೂ ಅವರು ಕೈಗೊಳ್ಳಲಿಲ್ಲ. ಸಾಕ್ಷಿಗಳ ಹೇಳಿಕೆ ದಾಖಲೆಯೂ ಕಣ್ಣೊರೆಸುವ ತಂತ್ರವಾಗಿತ್ತು. ಯಾವುದೇ ಎಫ್‌ಐಆರ್‌ ಅನ್ನು ಮುಂಬೈ ಪೊಲೀಸ್‌ ದಾಖಲಿಸಿಲ್ಲ’ ಎಂದು ಆರೋಪಿಸಿದ್ದಾರೆ.

ಪ್ರಭಾವ ಬಳಸಿಕೊಂಡು ಪಟ್ನಾದಲ್ಲಿ ತನ್ನ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನುವ ರಿಯಾ ಆರೋಪಕ್ಕೆ ಉತ್ತರಿಸಿರುವ ಸಿಂಗ್‌, ‘ಅಷ್ಟು ಪ್ರಭಾವ ಬಳಸಿಕೊಳ್ಳುವುದಿದ್ದರೆ ಆಕೆ ಈಗಾಗಲೇ ಬಂಧನದಲ್ಲಿ ಇರುತ್ತಿದ್ದಳು’ ಎಂದು ಆರೋಪವನ್ನು ಅಲ್ಲಗೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.