ಚೆನ್ನೈ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಜೀವಿಸುವ ಹಕ್ಕಿಗಿಂತ ದೊಡ್ಡದಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಕೋವಿಡ್ ಮಾರ್ಗಸೂಚಿಗಳಲ್ಲಿ ರಾಜಿ ಮಾಡಿಕೊಳ್ಳದೆ ತಮಿಳುನಾಡಿನ ದೇಗುಲವೊಂದರಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುವ ಬಗ್ಗೆ ಸಾಧ್ಯಸಾಧ್ಯತೆಗಳನ್ನು ಪರಿಶೀಲಿಸುವಂತೆ ಹೈಕೋರ್ಟ್, ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.
ಈ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ, "ಧಾರ್ಮಿಕ ವಿಧಿಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಜೀವನದ ಹಕ್ಕಿಗೆ ಒಳಪಟ್ಟಿರಬೇಕು. ಧಾರ್ಮಿಕ ಹಕ್ಕು ಜೀವನದ ಹಕ್ಕಿಗಿಂತ ದೊಡ್ಡದಲ್ಲ... ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಇದರಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ," ಎಂದು ಮೌಖಿಕವಾಗಿ ಹೇಳಿದ್ದಾರೆ.
ಕೋವಿಡ್ -19 ಪ್ರೋಟೊಕಾಲ್ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಯಾವುದೇ ರಾಜಿ ಮಾಡಿಕೊಳ್ಳದೆ ತಿರುಚಿರಾಪಳ್ಳಿ ಜಿಲ್ಲೆಯ ಶ್ರೀರಂಗಂನ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಉತ್ಸವಗಳು ಮತ್ತು ಆಚರಣೆಗಳನ್ನು ನಡೆಸುವ ಸಾಧ್ಯತೆಯನ್ನು ಪರಿಶೀಲೀಸುವಂತೆ ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ, ನ್ಯಾಯಮೂರ್ತಿಗಳಾದ ಸೆಂಥಿಲ್ ಕುಮಾರ್ ಮತ್ತು ರಾಮಮೂರ್ತಿ ಅವರಿದ್ಧ ತ್ರಿಸದಸ್ಯ ಪೀಠ ಸರ್ಕಾರಕ್ಕೆ ನಿರ್ದೆಶನ ನೀಡಿದೆ.
ಪ್ರಾಚೀನ ಶ್ರೀರಂಗಂ ದೇವಸ್ಥಾನದಲ್ಲಿ ಉತ್ಸವಗಳು ಮತ್ತು ಆಚರಣೆಗಳನ್ನು ನಿಯಮಿತವಾಗಿ ನಡೆಸಲು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಅರ್ಜಿದಾರ ರಂಗರಾಜನ್ ನರಸಿಂಹನ್ ಕೋರಿದ್ದರು. ಈ ಮಧ್ಯೆ, ಕೋವಿಡ್ ಕಾಲದಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಕೋಲ್ಕತ್ತಾ ಹೈಕೋರ್ಟ್, ದುರ್ಗಾ ಪೂಜೆ ಉತ್ಸವಗಳನ್ನು ನಿಯಂತ್ರಿಸುವ ಆದೇಶ ಜಾರಿಗೊಳಿಸಿದ್ದನ್ನು ಮುಖ್ಯ ನ್ಯಾಯಮೂರ್ತಿ ಇಲ್ಲಿ ಉಲ್ಲೇಖಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.