ADVERTISEMENT

ಬಿಕೆಯು ಪ್ರತಿಭಟನೆಗೆ ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ಬೆಂಬಲ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎರಡು ತಿಂಗಳಿನಿಂದ ಗಾಜಿಯಾಪುರದಲ್ಲಿ ಪ್ರತಿಭಟನೆ

ಪಿಟಿಐ
Published 29 ಜನವರಿ 2021, 5:35 IST
Last Updated 29 ಜನವರಿ 2021, 5:35 IST
ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್‌
ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್‌   

ನವದೆಹಲಿ: ವಿದಾದಿತ ಕೃಷಿ ಕಾಯ್ದೆಗಳ ವಿರೋಧಿಸಿ ದೆಹಲಿ– ಗಾಜಿಯಾಬಾದ್‌ ಗಡಿಯಲ್ಲಿ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ನಡೆಸುತ್ತಿರುವ ಪ್ರತಿಭಟನೆಗೆ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮುಖ್ಯಸ್ಥ ಅಜಿತ್‌ ಸಿಂಗ್‌ ಬೆಂಬಲ ಸೂಚಿಸಿದ್ದಾರೆ.

ಈ ಕುರಿತು ಬಿಕೆಯು ಅಧ್ಯಕ್ಷ ನರೇಶ್ ಟಿಕಾಯತ್ ಮತ್ತು ವಕ್ತಾರ ರಾಕೇಶ್ ಟಿಕಾಯತ್ ಅವರೊಂದಿಗೆ ಮಾತನಾಡಲಾಗಿದೆ ಎಂದು ಆರ್‌ಎಲ್‌ಡಿ ಉಪಾಧ್ಯಕ್ಷರೂ ಆಗಿರುವ ಅಜಿತ್ ಸಿಂಗ್ ಪುತ್ರ ಜಯಂತ್ ಚೌಧರಿ ತಿಳಿಸಿದ್ದಾರೆ.

‘ಇದು ರೈತರ ಜೀವನ ಮತ್ತು ಸಾವಿನ ಪ್ರಶ್ನೆಯಾಗಿದೆ. ಆದರೆ ಯಾರೂ ಚಿಂತಿಸಬೇಡಿ. ಎಲ್ಲರೂ ಒಗ್ಗಟ್ಟಾಗಿ ಎದುರಿಸೋಣ. ಇದು ಚೌಧರಿ ಸಾಹೇಬ್ ಅವರ (ಅಜಿತ್ ಸಿಂಗ್‌) ಸಂದೇಶ’ ಎಂದು ಜಯಂತ್ ಚೌಧರಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

ರೈತ ಮುಖಂಡ ದಿವಂಗತ ಮಹೇಂದ್ರಸಿಂಗ್ ಟಿಕಾಯತ್‌ ಅವರ ಪುತ್ರರಾದ ನರೇಶ್ ಮತ್ತು ರಾಕೇಶ್ ಟಿಕಾಯತ್, ಬಿಕೆಯು ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ಎರಡು ತಿಂಗಳುಗಳಿಂದ ಉತ್ತರ ಪ್ರದೇಶದ ಗಡಿಯಲ್ಲಿ (ಗಾಜಿಪುರ ಗಡಿ) ತಮ್ಮ ಒಕ್ಕೂಟದ ಕಾರ್ಯಕರ್ತರೊಂದಿಗೆ ಹೋರಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.