ಬಾಂಬೆ ಹೈಕೋರ್ಟ್
ಮುಂಬೈ: ಟ್ರಕ್ ಸಹಾಯಕನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಎನ್.ಆರ್. ಬೋರ್ಕರ್ ನೇತೃತ್ವದ ಪೀಠವು ಆರು ವಾರಗಳೊಳಗೆ ಟ್ರಕ್ ಸಹಾಯಕ ಪ್ರಹ್ಲಾದ್ ಕುಮಾರ್ಗೆ ₹4 ಲಕ್ಷ ಹಾಗೂ ಪೊಲೀಸ್ ಕಲ್ಯಾಣ ನಿಧಿಗೆ 1 ಲಕ್ಷ ಪರಿಹಾರ ನೀಡುವಂತೆ ದಿಲೀಪ್ ಖೇಡ್ಕರ್ ಅವರಿಗೆ ನಿರ್ದೇಶಿಸಿದೆ.
ನವಿ ಮುಂಬೈ ಸೆಷನ್ಸ್ ನ್ಯಾಯಾಲಯವು ದಿಲೀಪ್ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಖೇಡ್ಕರ್ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮುಂಬೈನ ಸ್ಯಾಟಲೈಟ್ ಟೌನ್ಶಿಪ್ನ ಮುಳುಂದ್– ಐರೋಲಿ ರಸ್ತೆಯಲ್ಲಿ ಸೆಪ್ಟೆಂಬರ್ 13ರಂದು ಟ್ರಕ್ವೊಂದು ಎಸ್ಯುವಿ ಕಾರಿಗೆ ಸಣ್ಣ ಪ್ರಮಾಣದಲ್ಲಿ ಡಿಕ್ಕಿಯಾಗಿತ್ತು. ಟ್ರಕ್ನಲ್ಲಿ ಚಾಲಕ ಚಾಂದ್ಕುಮಾರ್ ಚವಾಣ್ ಅವರೊಂದಿಗೆ 22 ವರ್ಷದ ಪ್ರಹ್ಲಾದ್ ಕುಮಾರ್ ಇದ್ದರು.
ನಷ್ಟ ಪರಿಹಾರ ನೀಡುವಂತೆ ದಿಲೀಪ್ ಹಾಗೂ ಇನ್ನಿಬ್ಬರು ಚಾಂದ್ಕುಮಾರ್ ಹಾಗೂ ಪ್ರಹ್ಲಾದ್ಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಗಲಾಟೆ ನಡೆಯಿತು. ಬಳಿಕ ಪೊಲೀಸ್ ಠಾಣೆಗೆ ಹೋಗುವ ನೆಪದಲ್ಲಿ ಪ್ರಹ್ಲಾದ್ ಕುಮಾರ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದರು. ಪ್ರಹ್ಲಾದ್ ಅವರನ್ನು ಪೂಜಾ ಖೇಡ್ಕರ್ ಅವರ ಪುಣೆಯ ನಿವಾಸದಲ್ಲಿ ಪೊಲೀಸರು ರಕ್ಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.