ಪುಣೆ: ಭಾರತೀಯ ಸೇನೆ 2016ರಲ್ಲಿ ಪಾಕಿಸ್ತಾನ ವಿರುದ್ಧ ನಡೆಸಿದ ಸರ್ಜಿಕಲ್ ದಾಳಿ ವೇಳೆ ಚಿರತೆಗಳ ಮಲ ಮೂತ್ರ ಬಳಕೆ ಮಾಡಲಾಗಿತ್ತು ಎಂದು ಮಾಜಿ ಲೆ.ಜನರಲ್ ರಾಜೇಂದ್ರ ನಿಂಬೊರ್ಕರ್ ತಿಳಿಸಿದ್ದಾರೆ.
ಪಾಕಿಸ್ತಾನ ನೆಲದಲ್ಲಿ ನಡೆಸಿದ ಸರ್ಜಿಕಲ್ ದಾಳಿ ಸಮಯದಲ್ಲಿ ಚಿರತೆಗಳ ಮಲ ಮೂತ್ರವನ್ನು ತೆಗೆದುಕೊಂಡು ಹೋಗಲಾಗಿತ್ತು. ಇದರಿಂದ ಪಾಕ್ ಸೇನೆಗೆ ನಮ್ಮ ಒಳಸುಳುವಿಕೆ ತಿಳಿಯಲಿಲ್ಲ ಎಂದು ಅವರು ಹೇಳಿದ್ದಾರೆ. ಇಲ್ಲಿನ ಬಾಜಿರಾವ್ ಪೇಶ್ವೆ ಪ್ರತಿಷ್ಠಾನ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಾಕಿಸ್ತಾನದ ಗಡಿ ಗ್ರಾಮಗಳ ಮೂಲಕ ತೆರಳುವಾಗ ನಾವು ಅಲ್ಲಲ್ಲಿ ಚಿರತೆಗಳ ಮಲ ಮೂತ್ರವನ್ನು ಸಿಂಪಡಿಸಿದೆವು. ಇದರ ವಾಸನೆಯಿಂದ ನಾಯಿಗಳು ಬೊಗಳಲಿಲ್ಲ, ಹಾಗಾಗಿ ಶತ್ರುಗಳು ನಮ್ಮ ಮೇಲೆ ಪ್ರತಿದಾಳಿ ನಡೆಸಲು ಸಾಧ್ಯವಾಗಲಿಲ್ಲ. ಹಳ್ಳಿಗಳಲ್ಲಿ ಚಿರತೆಗಳು ದಾಳಿ ಮಾಡಿದಾಗ ನಾಯಿಗಳು ಬೊಗಳದೇ ಸುಮ್ಮನಿರುವುದು ನನ್ನ ಅನುಭವಕ್ಕೆ ಬಂದಿತ್ತು. ಇದನ್ನು ಸರ್ಜಿಕಲ್ ದಾಳಿ ವೇಳೆ ಪ್ರಯೋಗ ಮಾಡಲಾಯಿತು ಎಂದು ಅವರು ಹೇಳಿದರು.
2016ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಸರ್ಜಿಕಲ್ ದಾಳಿಯಲ್ಲಿ ಪಾಕಿಸ್ತಾನದ ಮೂರು ಸೇನಾ ನೆಲೆಗಳನ್ನು ನಾಶ ಮಾಡಿ, 27 ಜನ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು ಎಂದುರಾಜೇಂದ್ರ ನಿಂಬೊರ್ಕರ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.