
ತಿರುವನಂತಪುರ: ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ.ರಾಯ್ ಅವರು ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳಿಂದ ಕಿರುಕುಳ ಎದುರಿಸುತ್ತಿರಲಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ಜೋಸೆಫ್ ಹೇಳಿದ್ದಾರೆ.
ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ರಾಯ್ ಅವರಿಗೆ ಐಟಿ ಅಧಿಕಾರಿಗಳಿಂದ ಒತ್ತಡವಿತ್ತು ಎಂದು ಅವರ ಸಹೋದರ ಸಿ.ಜೆ.ಬಾಬು ಹೇಳಿದ್ದಾರೆ. ರಾಯ್ ಅವರ ನಿಧನದ ನಂತರ ಆಘಾತಕ್ಕೆ ಒಳಗಾಗಿ ಅವರು ಹೀಗೆ ಹೇಳಿರಬಹುದು. ಸತ್ಯ ಗೊತ್ತಿಲ್ಲದೆ ಯಾವುದೇ ಹೇಳಿಕೆ ನೀಡದಂತೆ ಅವರಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.
ರಾಯ್ ಅವರ ನಿಧನಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಸೂಚನೆ ನೀಡಿದೆ ಎಂದೂ ತಿಳಿಸಿದರು.
‘ಆದಾಯ ತೆರಿಗೆ ಇಲಾಖೆಯು ಶೋಧ ನಡೆಸುವುದು ಸಾಮಾನ್ಯ ಸಂಗತಿ. ಇದಕ್ಕೂ ಮುನ್ನವೂ ನಮ್ಮ ಸಂಸ್ಥೆಯ ಮೇಲೆ ದಾಳಿ ನಡೆದಿತ್ತು. ಕೊಚ್ಚಿ ಕಚೇರಿಯಲ್ಲಿ ಇತ್ತೀಚೆಗೆ ಶೋಧ ನಡೆದಿತ್ತು. ಅಧಿಕಾರಿಗಳು ಗೌರವಯುತವಾಗಿಯೇ ನಡೆದುಕೊಂಡಿದ್ದರು. ಬೆಂಗಳೂರಿನ ಕಚೇರಿ ಮೇಲೆ ದಾಳಿ ನಡೆದಾಗಲೂ ಅವರು ಯಾವುದೇ ತೊಂದರೆ ನೀಡಿಲ್ಲ ಎಂಬ ಬಗ್ಗೆ ನನಗೆ ವಿಶ್ವಾಸವಿದೆ’ ಎಂದರು.
ಸರ್ಕಾರದ ಯಾವುದೇ ಇಲಾಖೆಯ ಜೊತೆ ಸಂಘರ್ಷ ಬೇಡ ಎಂಬ ಕಾರಣಕ್ಕಾಗಿ ಆದಾಯ ತೆರಿಗೆ ಇಲಾಖೆ ವಿರುದ್ಧ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.