ಅಹಮದಾಬಾದ್: ಅಧಿಕ ಬಡ್ಡಿ ಆಮಿಷವೊಡ್ಡಿ ಭಾರಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಹಗರಣ ಗುಜರಾತ್ನ ಸಬರ್ಕಾಂತಾ ಜಿಲ್ಲೆಯಲ್ಲಿ ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. ವಹಿವಾಟಿನ ಮೊತ್ತ ₹6000 ಕೋಟಿಗೂ ಅಧಿಕ ಎಂಬ ಅಂದಾಜಿದೆ.
ಹಗರಣದ ಸೂತ್ರಧಾರಿ ಎಂದು ಶಂಕಿಸಲಾದ, ಬಿಜೆಪಿ ಸದಸ್ಯನೊಬ್ಬ ಸದ್ಯ ತಲೆಮರೆಸಿಕೊಂಡಿದ್ದಾನೆ. ಕನಿಷ್ಠ ಏಳು ಜಿಲ್ಲೆಗಳಲ್ಲಿ ಈ ಹಗರಣ ವ್ಯಾಪಿಸಿದೆ. ಅಧಿಕ ಬಡ್ಡಿಯನ್ನು ನೀಡುವ ಆಮಿಷವೊಡ್ಡಿ ಹೂಡಿಕೆ ಆಕರ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಾಮಧೇಯ ದೂರು ಆಧರಿಸಿ ಸಿಐಡಿ ತಂಡವು ಸಬರ್ಕಾಂತಾ ಮತ್ತು ಇತರ ಆರು ಜಿಲ್ಲೆಗಳಲ್ಲಿ ಬಿಝಡ್ ಇಂಟರ್ನ್ಯಾಷನಲ್ ಬ್ರೋಕಿಂಗ್ ಪ್ರೈವೇಟ್ ಲಿಮಿಟೆಡ್ನ ಕಚೇರಿಗಳ ಮೇಲೆ ದಾಳಿ ನಡೆಸಿತು.
ಎರಡು ಬ್ಯಾಂಕ್ಗಳಲ್ಲಿ ₹175 ಕೋಟಿ ವರೆಗೆ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಸಂಸ್ಥೆಯ ಸಿಇಒ ಭೂಪೇಂದ್ರ ಸಿನ್ಹಾ ಪರ್ಬತ್ ಸಿನ್ಹಾ ಝಲಾ ಮತ್ತು ಇತರ ಏಜೆಂಟರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಝಲಾ ಅವರು ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆಗೆ ರಾಜ್ಯ ಬಿಜೆಪಿ ವಕ್ತಾರರು ಲಭ್ಯರಾಗಲಿಲ್ಲ. ಝಲಾ ಅವರು ಲೋಕಸಭೆ ಚುನಾವಣೆಯಲ್ಲಿ ಸಬರಕಾಂತಾ ಜಿಲ್ಲೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಬಳಿಕ ವಾಪಸು ಪಡೆದಿದ್ದರು. ಈತ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಯಸಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.