ADVERTISEMENT

ತಮಿಳುನಾಡಿನಲ್ಲಿ ಆರೆಸ್ಸೆಸ್‌ ಯಾತ್ರೆ ರದ್ದು

ಹೈಕೋರ್ಟ್‌ ಷರತ್ತಿನ ಬಳಿಕ ಸಂಘದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 16:08 IST
Last Updated 5 ನವೆಂಬರ್ 2022, 16:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಮದ್ರಾಸ್‌ ಹೈಕೋರ್ಟ್‌ ಕೆಲವು ನಿರ್ಬಂಧಗಳನ್ನು ವಿಧಿಸಿದ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಭಾನುವಾರ ತಮಿಳುನಾಡಿನಲ್ಲಿ ನಡೆಸಲು ನಿರ್ಧರಿಸಿದ್ದ ಯಾತ್ರೆಯನ್ನು ರದ್ದು ಮಾಡಿದೆ.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಕೆ.ಇಲಂತ್ರಿರೈಯನ್‌ ಅವರು, 44 ಕಡೆಗಳಲ್ಲಿ ಮಾತ್ರ ಯಾತ್ರೆ ನಡೆಸಲು ಅವಕಾಶ ನೀಡಿದ್ದರು. ಕೊಯಮತ್ತೂರು, ಕನ್ಯಾಕುಮಾರಿ ಸೇರಿದಂತೆ 6 ಕೋಮು ಸೂಕ್ಷ್ಮ ಪ್ರದೇಶದಲ್ಲಿ ಮೆರವಣಿಗೆಗೆ ಅವಕಾಶ ನಿರಾಕರಿಸಿ ಆದೇಶ ಹೊರಡಿಸಿದ್ದರು. ಆದರೆ, ಮೈದಾನ ಅಥವಾ ಸ್ಟೇಡಿಯಂ ಒಳಗೆ ಮಾತ್ರ ಮೆರವಣಿಗೆ ಅಥವಾ ಸಾರ್ವಜನಿಕ ಸಭೆ ನಡೆಸಬೇಕು. ಹಾಗೆಯೇ ಯಾತ್ರೆಯಲ್ಲಿ ಭಾಗಿಯಾಗುವವರು ಬಡಿಗೆ, ಲಾಠಿ ಅಥವಾ ಯಾವುದೇ ಶಸ್ತ್ರಗಳನ್ನು ಹಿಡಿದುಕೊಳ್ಳುವಂತಿಲ್ಲ ಎಂದು ಷರತ್ತು ವಿಧಿಸಿದ್ದರು.

ಇದಕ್ಕೆ ಒಪ್ಪದ ಆರ್‌ಎಸ್‌ಎಸ್‌ ರ‍್ಯಾಲಿಯನ್ನು ರದ್ದು ಮಾಡಿ, ಈ ಆದೇಶದವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.

ADVERTISEMENT

‘ಮೈದಾನ ಅಥವಾ ಸ್ಟೇಡಿಯಂ ಒಳಗೆ ಯಾತ್ರೆ ನಡೆಸುವಂತೆ ಕೋರ್ಟ್‌ ಹೇಳಿದೆ. ಆದರೆ ಇದು ಸಾಧ್ಯವೇ ಇಲ್ಲ. ಜಮ್ಮು–ಕಾಶ್ಮೀರ, ಕೇರಳ ಮತ್ತು ಬಂಗಾಳವೇ ಆಗಿರಲಿ, ಯಾತ್ರೆಯು ಸಾರ್ವಜನಿಕ ಸ್ಥಳದಲ್ಲಿಯೇ ನಡೆಯಬೇಕು. ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ. ನ.6ರಂದು ನಡೆಸಲು ಉದ್ದೇಶಿಸಿದ್ದ ಯಾತ್ರೆಯನ್ನು ರದ್ದು ಮಾಡಲು ನಿರ್ಧರಿಸಿದ್ದೇವೆ’ ಎಂದು ಸಂಘದ ದಕ್ಷಿಣ ವಲಯ ಅಧ್ಯಕ್ಷ ಆರ್‌.ವನ್ನಿಯರಾಜನ್‌ ಅವರು ತಿಳಿಸಿದ್ದಾರೆ.

ಅ.2ರಂದು ತಮಿಳುನಾಡಿನ 50 ಕಡೆಗಳಲ್ಲಿ ಯಾತ್ರೆ ನಡೆಸಲು ಆರ್‌ಎಸ್‌ಎಸ್‌ ತೀರ್ಮಾನಿಸಿತ್ತು. ಇದು ರಾಜಕೀಯ ವಾಗ್ವಾದಕ್ಕೆ ಕಾರಣವಾದ ನಂತರ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು ಸರ್ಕಾರ ಎಲ್ಲಾ ರೀತಿಯ ರ‍್ಯಾಲಿ, ಮೆರವಣಿಗೆಗಳಿಗೆ ಅನುಮತಿ ನಿರಾಕರಿಸಿತ್ತು. ಆದಾಗ್ಯೂ ಕೋರ್ಟ್‌, 44 ಕಡೆಗಳಲ್ಲಿ ಯಾತ್ರೆ ನಡೆಸಲು ಷರತ್ತುಬದ್ಧ ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.