
ಮೋಹನ್ ಭಾಗವತ್
ಮುಂಬೈ: ‘ಆರ್ಎಸ್ಎಸ್ನಿಂದಾಗಿಯೇ ಬಿಜೆಪಿಗೆ ಒಳ್ಳೆಯ ದಿನಗಳು(ಅಚ್ಛೇ ದಿನ್) ಬಂದಿವೆ. ಈ ವಿಚಾರದಲ್ಲಿ ಆರ್ಎಸ್ಎಸ್ನ ಪಾತ್ರ ಇದೆ’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
‘ಬಿಜೆಪಿಯಿಂದಾಗಿ ಆರ್ಎಸ್ಎಸ್ಗೆ ಒಳ್ಳೆಯ ದಿನಗಳು ಬಂದಿಲ್ಲ. ಸ್ವಯಂ ಸೇವಕರ ಪರಿಶ್ರಮ ಹಾಗೂ ಸೈದ್ಧಾಂತಿಕ ಬದ್ಧತೆಯಿಂದಾಗಿ ಸಂಘಕ್ಕೆ ಒಳ್ಳೆಯ ದಿನಗಳು ಬಂದಿವೆ. ನಾವು ರಾಮ ಮಂದಿರ ನಿರ್ಮಾಣಕ್ಕೆ ದೃಢಸಂಕಲ್ಪ ಮಾಡಿದ್ದೆವು. ಇದಕ್ಕೆ ಬೆಂಬಲ ನೀಡಿದವರಿಗೆ ಲಾಭವಾಗಿದೆ’ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಈ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.
‘ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ, ದೇಶದ ಭದ್ರತೆಯಲ್ಲಿ ಗಮನಾರ್ಹ ಬದಲಾವಣೆ ಸೇರಿ ಹಲವು ವಿಚಾರಗಳಲ್ಲಿ ಬಿಜೆಪಿಯ ಸಾಧನೆ ಗಮನಾರ್ಹ’ ಎಂದು ಹೇಳಿದರು.
‘ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಬಿಜೆಪಿ ಸೇರಿದಂತೆ ಸಂಘ ಪರಿವಾರದಡಿ ಅನೇಕ ಸಂಘಟನೆಗಳಿದ್ದು, ಎಲ್ಲವೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ. ಈ ಸಂಘಟನೆಗಳಲ್ಲಿ ಸ್ವಯಂ ಸೇವಕರೂ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.
‘ಅಗತ್ಯ ಕಂಡುಬಂದಲ್ಲಿ ಈ ಸಂಘಟನೆಗಳಿಗೆ ನಾವು ಮಾರ್ಗದರ್ಶನ ನೀಡುತ್ತೇವೆ. ಕೆಲವೊಮ್ಮೆ ಎಚ್ಚರಿಕೆ ನೀಡುತ್ತೇವೆ. ಅಂತಿಮ ನಿರ್ಧಾರ ಅವುಗಳದ್ದೇ ಆಗಿರುತ್ತದೆ. ಆದರೆ, ಕೆಲವು ಸಲ ಅವರು ಮಾಡಿದ ತಪ್ಪುಗಳಿಗೆ ನಮ್ಮನ್ನು ದೂಷಿಸಲಾಗುತ್ತದೆ’ ಎಂದೂ ಹೇಳಿದರು.
ನಮ್ಮದು ‘ವೋಟ್ ವಾದಿ’ ವ್ಯವಸ್ಥೆಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಮತದಾರರೇ ರಾಜಕೀಯ ಒತ್ತಡ ಹೇರುತ್ತಾರೆಯೇ ಹೊರತು ಆರ್ಎಸ್ಎಸ್ ಅಲ್ಲ. ಇದು ಬದಲಾಗಬೇಕುಮೋಹನ್ ಭಾಗವತ್ ಆರ್ಎಸ್ಎಸ್ ಮುಖ್ಯಸ್ಥ
ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕುರಿತು ಹೆಚ್ಚು ಮಾಹಿತಿ ಇಲ್ಲ. ಆದರೆ ಜಾಗತಿಕ ಮಟ್ಟದಲ್ಲಿ ಭಾರತ ಏಕಾಂಗಿಯಾಗಿ ಇರಲು ಸಾಧ್ಯವಿಲ್ಲ.
ಕಮ್ಯುನಿಸ್ಟರು ಅಪೇಕ್ಷೆಪಟ್ಟಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಆರ್ಎಸ್ಎಸ್ ಸಿದ್ಧವಿದೆ (100 ವರ್ಷ ಕಳೆದರೂ ಕಮ್ಯುನಿಸ್ಟರು ಭದ್ರವಾದ ನೆಲೆ ಕಂಡುಕೊಂಡಿಲ್ಲವೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ)
‘ಅಧ್ಯಾತ್ಮವಿಲ್ಲದ ಧರ್ಮ ಆಕ್ರಮಣಕಾರಿ ಆಗುತ್ತದೆ’
‘ಇಸ್ಲಾಂ ಅನ್ನು ಶಾಂತಿ ಬೋಧಿಸುವ ಧರ್ಮ ಎನ್ನಲಾಗುತ್ತಿದೆ. ಆದರೆ, ಶಾಂತಿ ಕಂಡುಬರುತ್ತಿಲ್ಲ. ಆಧ್ಯಾತ್ಮಿಕತೆ ಇಲ್ಲದ ಧರ್ಮವು ಆಕ್ರಮಣಕಾರಿಯಾಗುತ್ತದೆ ಹಾಗೂ ಪ್ರಾಬಲ್ಯ ಸಾಧಿಸಲು ಮುಂದಾಗುತ್ತದೆ’ ಎಂದು ಮೋಹನ್ ಭಾಗವತ್ ಹೇಳಿದರು.
‘ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳು ಕ್ರಮವಾಗಿ ಏಸು ಕ್ರಿಸ್ತ ಮತ್ತು ಪ್ರವಾದಿ ಮೊಹಮ್ಮದ್ ಅವರು ಬೋಧಿಸಿರುವಂತೆ ಈಗ ಇಲ್ಲ. ನೈಜ ಇಸ್ಲಾಂ ಮತ್ತು ಕ್ರೈಸ್ತ ಧರ್ಮ ಪಾಲನೆ ಅಗತ್ಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಸಾಕಷ್ಟು ವಿರೋಧದ ನಡುವೆಯೂ ಸಂಘದ ಸ್ವಯಂ ಸೇವಕರು ಮುಸ್ಲಿಂ ಸಮುದಾಯ ದೊಂದಿಗೆ ಕೆಲಸ ಮಾಡುತ್ತಿದ್ದಾರಲ್ಲ’ ಎಂಬ ಮತ್ತೊಂದು ಪ್ರಶ್ನೆಗೆ,‘ಎರಡೂ ಕಡೆಯವರು ವಿರೋಧ ಮಾಡುತ್ತಲೇ ಇದ್ದರೆ ಕೇವಲ ಸಂಘರ್ಷವೇ ಇರುತ್ತದೆ. ನಾವು ಏನನ್ನೂ ಸಾಧಿಸಲು ಸಾಧ್ಯ ಇಲ್ಲ’ ಎಂದು ಅವರು ಪ್ರತಿಕ್ರಿಯಸಿದರು.
‘ದೇಶದ ಮುಸ್ಲಿಮರು ಹಾಗೂ ಕ್ರೈಸ್ತರೊಂದಿಗೆ ಸ್ನೇಹ, ಮಾತುಕತೆ ಹಾಗೂ ನಂಬಿಕೆಯ ಅಗತ್ಯವಿದೆ. ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಎಂಬುದು ಇಲ್ಲ. ನಾವೆಲ್ಲಾ ಒಂದೇ ಸಮಾಜ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.