ADVERTISEMENT

ಮಾಧವ್‌ ವೈದ್ಯ ಅಂತ್ಯಸಂಸ್ಕಾರದಲ್ಲಿ ಭಾಗವತ್‌, ಗಡ್ಕರಿ ಭಾಗಿ

ಪಿಟಿಐ
Published 20 ಡಿಸೆಂಬರ್ 2020, 7:24 IST
Last Updated 20 ಡಿಸೆಂಬರ್ 2020, 7:24 IST
ಮಾಧವ್‌ ಗೋವಿಂದ ವೈದ್ಯ–ಟ್ವಿಟರ್‌ ಚಿತ್ರ
ಮಾಧವ್‌ ಗೋವಿಂದ ವೈದ್ಯ–ಟ್ವಿಟರ್‌ ಚಿತ್ರ   

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿಚಾರವಾದಿ ಮಾಧವ್ ಗೋವಿಂದ್ ವೈದ್ಯ ಅವರ ಅಂತಿಮ ಕ್ರಿಯೆಯನ್ನು ಮಹಾರಾಷ್ಟ್ರದ ನಾಗಪುರ ಚಿತಾಗಾರದಲ್ಲಿ ಭಾನುವಾರ ನಡೆಸಲಾಯಿತು.

ಆರ್‌ಎಸ್‌ಎಸ್‌ನ ಮೊದಲ ವಕ್ತಾರ ಮಾಧವ್‌ ವೈದ್ಯ ಅವರು(97) ಅಲ್ಪಕಾಲದ ಅನಾರೋಗ್ಯದಿಂದಾಗಿ ಶನಿವಾರ ನಾಗಪುರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.

ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌, ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಮತ್ತಿತರರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಅಂತ್ಯಸಂಸ್ಕಾರಕ್ಕೆ ಮೊದಲು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮಾಧವ್‌ ಅವರ ಮನೆಗೂ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಎಂ.ಜಿ.ವೈದ್ಯ ಅವರು ಸಂಘದ ಸಿದ್ಧಾಂತಕ್ಕೆ ಅನುಗುಣವಾಗಿ ಬದುಕಿದವರು. ಅವರು ಆರ್‌ಎಸ್‌ಎಸ್‌ನ ವಿಶ್ವಕೋಶ. ನಾವು ಒಬ್ಬ ಪೋಷಕನನ್ನು ಕಳೆದುಕೊಂಡಿದ್ದೇವೆ’ ಎಂದರು.

ಡಿಸೆಂಬರ್‌ 31 ರಂದು ಮಾಧವ್‌ ವೈದ್ಯರ ನೆನಪಿನಲ್ಲಿ ರೆಶಿಂಭಾಗಿನ ಡಾ.ಹೆಡ್ಗೆವಾರ್ ಸ್ಮೃತಿ ಮಂದಿರದಲ್ಲಿ ಸಭೆ ನಡೆಯಲಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಅವರು ಟ್ವೀಟ್‌ ಮಾಡಿ,‘ ಮಾಧವ್‌ ವೈದ್ಯ ಅವರು ಸಂಘ ಪರಿವಾರಕ್ಕಾಗಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸದಾ ಸ್ಮರಿಸಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.