ADVERTISEMENT

ದೆಹಲಿ: ಎಎಪಿ–ಬಿಜೆಪಿ ಸದಸ್ಯರವಾಗ್ವಾದ, ಕಲಾಪ ಮುಂದೂಡಿಕೆ

ಪಿಟಿಐ
Published 21 ಮಾರ್ಚ್ 2023, 13:07 IST
Last Updated 21 ಮಾರ್ಚ್ 2023, 13:07 IST
   

ನವದೆಹಲಿ: ಬಜೆಟ್‌ ವಿವರಗಳ ಸೋರಿಕೆಗೆ ಸಂಬಂಧಿಸಿ ಹಣಕಾಸು ಸಚಿವರ ವಿರುದ್ಧ ನೀಡಿದ ಹಕ್ಕುಚ್ಯುತಿ ನೋಟಿಸ್‌ ದೆಹಲಿ ವಿಧಾನಸಭೆಯಲ್ಲಿ ಮಂಗಳವಾರ ಆಡಳಿತಾರೂಢ ಎಎಪಿ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಕೋಲಾಹಲವನ್ನುಂಟು ಮಾಡಿತು.

ಹಣಕಾಸು ಸಚಿವ ಕೈಲಾಶ್‌ ಗೆಹಲೋತ್‌ ಅವರ ಭಾಷಣದ ಹಿಂದೆಯೇ ಎಎಪಿ ಸದಸ್ಯರು ಅಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದ್ದು, ಕಲಾಪವನ್ನು ಬೆಳಿಗ್ಗೆ ಒಮ್ಮೆ ಮುಂದೂಡಲಾಯಿತು. ಸದನ ಮತ್ತೆ ಸೇರಿದಾಗ ಬಿಜೆಪಿ ಶಾಸಕ ವಿಜೇಂದರ್‌ ಗುಪ್ತಾ ಅವರು ಹಕ್ಕುಚ್ಯುತಿ ನೋಟಿಸ್‌ ನೀಡಲು ಮುಂದಾದರು.

‘ನಿಯಮಾನುಸಾರ ಇಂತಹ ನೋಟಿಸ್‌ ಅನ್ನು ಮೂರು ಗಂಟೆ ಮೊದಲು ನೀಡಬೇಕು. ಈಗಲೇ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುವುದರ ಹಿಂದೆ ಸದನದ ಸಮಯ ವ್ಯರ್ಥ ಮಾಡುವ ಗುರಿ ಇದ್ದಂತಿದೆ’ ಎಂದು ಸ್ಪೀಕರ್‌ ರಾಮ್‌ ನಿವಾಸ್‌ ಗೋಯಲ್‌ ಆಕ್ಷೇಪಿಸಿದರು.

ADVERTISEMENT

‘ಸೋಮವಾರ ಮಂಡಿಸಲಾದ ಬಜೆಟ್‌ನ ಮಾಹಿತಿ ಸೋರಿಕೆ ಕುರಿತು ಈಗ ನೋಟಿಸ್‌ ನೀಡಿದ್ದೀರಿ’ ಎಂದು ಹೇಳಿದ ಸ್ಪೀಕರ್, ಗುಪ್ತಾ ಅವರಿಗೆ ಕಟ್ಟೆಚ್ಚರ ನೀಡಿದರು.

‘ಸದಸ್ಯರು ಸದನದಲ್ಲಿ ಮಾತನಾಡಿದ್ದಕ್ಕೂ, ನೋಟಿಸ್‌ನಲ್ಲಿ ಉಲ್ಲೇಖಿಸಿರುವುದಕ್ಕು ವ್ಯತ್ಯಾಸಗಳಿವೆ. ಈ ವಿಷಯವನ್ನು ನೀತಿ ಸಂಹಿತೆ ಸಮಿತಿಯ ವಿವೇಚನೆಗೆ ಒಪ್ಪಿಸಬೇಕು’ ಎಂದು ಸರ್ಕಾರದ ಮುಖ್ಯ ಸಚೇತಕ ದಿಲೀಪ್‌ ಪಾಂಡೆ ಸಲಹೆ ಮಾಡಿದರು.

ಅಂತಿಮವಾಗಿ ಈ ವಿಷಯವೇ ಬಿಜೆಪಿ ಮತ್ತು ಎಎಪಿ ಸದಸ್ಯರ ನಡುವೆ ಪರಸ್ಪರ ವಾಗ್ದಾಳಿಗೆ ನಾಂದಿಯಾಗಿ ಗೊಂದಲದ ಸ್ಥಿತಿ ನಿರ್ಮಿಸಿತು. ಹೀಗಾಗಿ, ಸ್ಪೀಕರ್‌ ಮತ್ತೆ ಕಲಾಪವನ್ನು ಮುಂದೂಡಿದರು.

ಈ ಕುರಿತ ಟ್ವೀಟ್‌ನಲ್ಲಿ ಗುಪ್ತಾ ಅವರು, ‘ಬಜೆಟ್ ಮಾಹಿತಿ ಸೋರಿಕೆ ಕುರಿತು ಹಣಕಾಸು ಸಚಿವ ಕೈಲಾಶ್‌ ಗೆಹಲೋತ್ ಮತ್ತು ಸಚಿವ ಗೋಪಾಲ್‌ ರೈ ವಿರುದ್ಧ ಹಕ್ಕುಚ್ಯುತಿ ಮಂಡಿಸಿದೆ. ಕ್ರಮಕೈಗೊಳ್ಳುವ ಬದಲು, ಮಾರ್ಷಲ್‌ ಮೂಲಕ ನನ್ನನ್ನೇ ಹೊರಕಳುಹಿಸಲಾಯಿತು’ ಎಂದು ಟೀಕಿಸಿದ್ದಾರೆ.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ರಾಮ್‌ವೀರ್‌ ಸಿಂಗ್ ಬಿಧೂರಿ ಅವರು, ಈ ಬೆಳವಣಿಗೆಗೆ ಸಂಬಂಧಿಸಿ ಹಣಕಾಸು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.