ADVERTISEMENT

ದೆಹಲಿ ಹಿಂಸಾಚಾರ: ವಿಶೇಷ ಪೊಲೀಸ್‌ ಆಯುಕ್ತರಾಗಿ ಎಸ್‌.ಎನ್‌.ಶ್ರೀವಾಸ್ತವ ನೇಮಕ 

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 11:15 IST
Last Updated 28 ಫೆಬ್ರುವರಿ 2020, 11:15 IST
ದೆಹಲಿ ಪೊಲೀಸ್‌ ಆಯುಕ್ತ ಎಸ್‌.ಎನ್‌.ಶ್ರೀವಾಸ್ತವ ಸುದ್ದಿಗಾರರೊಂದಿಗೆ ಮಾತನಾಡಿದರು. – ಎಎನ್‌ಐ ಟ್ವಿಟರ್‌ ಚಿತ್ರ
ದೆಹಲಿ ಪೊಲೀಸ್‌ ಆಯುಕ್ತ ಎಸ್‌.ಎನ್‌.ಶ್ರೀವಾಸ್ತವ ಸುದ್ದಿಗಾರರೊಂದಿಗೆ ಮಾತನಾಡಿದರು. – ಎಎನ್‌ಐ ಟ್ವಿಟರ್‌ ಚಿತ್ರ   

ನವದೆಹಲಿ: ಹಿರಿಯ ಐಪಿಎಸ್‌ ಅಧಿಕಾರಿ ಎಸ್‌.ಎನ್‌. ಶ್ರೀವಾಸ್ತವ ಅವರನ್ನು ದೆಹಲಿಯ ವಿಶೇಷ ಪೊಲೀಸ್‌ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ನೇಮಕ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

1985ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶ್ರೀವಾಸ್ತವ ಅವರು ಶನಿವಾರ ಅಮೂಲ್ಯ ಪಟ್ನಾಯಕ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರದ ಮಧ್ಯೆ ಸೋಮವಾರ ಶ್ರೀವಾಸ್ತವ ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ (ಸಿಆರ್‌ಪಿಎಫ್) ವಾಪಪ್‌ ಕಳುಹಿಸಿ ದೆಹಲಿವಿಶೇಷ ಪೊಲೀಸ್‌ ಆಯುಕ್ತರಾಗಿ ನೇಮಿಸಲಾಗಿದೆ. ‌

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೊಲೀಸರಿಂದ ಸೂಕ್ತ ಭದ್ರತೆ ಲಭಿಸುತ್ತದೆ ಎಂಬ ಭಾವನೆಜನರಿಗೆಮೂಡಿಸುವುದು ನನ್ನ ಪ್ರಮುಖ ಕೆಲಸವಾಗಿದೆ’ ಎಂದು ಹೇಳಿದರು.

ಅವರು ಈಶಾನ್ಯ ದೆಹಲಿಯ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಆರ್‌ಪಿಎಫ್‌ನಲ್ಲಿ ವಿಶೇಷ ಮಹಾನಿರ್ದೇಶಕರಾಗಿ (ತರಬೇತಿ) ಸೇವೆ ಸಲ್ಲಿಸಿದ್ದ ಶ್ರೀವಾಸ್ತವ ಅವರು ಈ ಹಿಂದೆ ದೆಹಲಿಯಲ್ಲಿ ಭಯೋತ್ಪಾದನಾ ನಿಗ್ರಹ ದಳ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸದ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 42 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.