ಶಬರಿಮಲೆ ದೇಗುಲ
–ಪಿಟಿಐ ಚಿತ್ರ
ಪತ್ತನಂತಿಟ್ಟ: ಶಬರಿಮಲೆ ಸಮೀಪದ ನಿಲಕ್ಕಲ್ನಲ್ಲಿ ₹ 6.12ಕೋಟಿ ವೆಚ್ಚದಲ್ಲಿ ಸುಧಾರಿತ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಕೇರಳ ಆರೋಗ್ಯ ಇಲಾಖೆ ಸೋಮವಾರ ಹೇಳಿದೆ. ಶಬರಿಮಲೆ ತೀರ್ಥಯಾತ್ರೆ ಋತು ಆರಂಭವಾಗುವ ಕೆಲವೇ ದಿನಗಳ ಮೊದಲು ಈ ಘೋಷಣೆ ಹೊರಬಿದ್ದಿದೆ.
ಸ್ಥಳೀಯರಿಗೂ ಹಾಗೂ ಯಾತ್ರಾರ್ಥಿಗಳಿಗೂ ಲಾಭವಾಗುವಂತೆ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ನಿಲಕ್ಕಲ್ನಲ್ಲಿ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ನೀಡಿದ ಭೂಮಿಯಲ್ಲಿ ಸುಮಾರು ₹ 6.12 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ವೀಣಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಿಲಕ್ಕಲ್ಗೆ ಭೇಟಿ ನೀಡುವ ಯಾತ್ರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆಯ ಭಾಗವಾಗಿ ಶಬರಿಮಲೆ ಬೇಸ್ ಕ್ಯಾಂಪ್ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ’ ಎಂದು ಜಾರ್ಜ್ ಹೇಳಿದ್ದಾರೆ.
ಆಸ್ಪತ್ರೆಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಒಟ್ಟು 10,700 ಚದರ ಅಡಿ ವಿಸ್ತೀರ್ಣದ ಈ ಕಟ್ಟಡದಲ್ಲಿ ಹೊರ ರೋಗಿಗಳಿಗೆ (ಒಪಿಡಿ) ಮೂರು ಕೊಠಡಿಗಳು, ತುರ್ತು ವಿಭಾಗ, ದಾದಿಯರ ಕೇಂದ್ರ, ಇಸಿಜಿ ಕೊಠಡಿ, ಐಸಿಯು ಮತ್ತು ಔಷಧಾಲಯದಂತಹ ಸೌಲಭ್ಯಗಳನ್ನು ಹೊಂದಿರುತ್ತದೆ.
ಮೊದಲ ಮಹಡಿಯಲ್ಲಿ ಎಕ್ಸ್-ರೇ ಕೊಠಡಿ, ಶಸ್ತ್ರಚಿಕಿತ್ಸಾ ಕೊಠಡಿ ಇರಲಿದೆ. ಉದ್ಘಾಟನಾ ಸಮಾರಂಭವು ನಿಲಕ್ಕಲ್ ದೇವಾಲಯದ ಬಳಿ ನಡೆಯಲಿದೆ ಎಂದು ಹೇಳಲಾಗಿದೆ.
ಈ ಕಾರ್ಯಕ್ರಮದಲ್ಲಿ ವೀಣಾ ಜಾರ್ಜ್, ರಾಣಿ ಕ್ಷೇತ್ರದ ಶಾಸಕ ಪ್ರಮೋದ್ ನಾರಾಯಣ್, ಸಂಸದ ಆಂಟೋ ಆ್ಯಂಟನಿ, ಉಪ ಸ್ಪೀಕರ್ ಚಿತ್ತಾಯಂ ಗೋಪಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಜಾರ್ಜ್ ಅಬ್ರಹಾಂ ಮತ್ತು ಟಿಡಿಬಿ ಅಧ್ಯಕ್ಷ ಪಿ ಎಸ್ ಪ್ರಶಾಂತ್ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.