ಶಬರಿಮಲೆ ದೇಗುಲ
–ಪಿಟಿಐ ಚಿತ್ರ
ಪತ್ತನಂತಿಟ್ಟ(ಕೇರಳ): ಶಬರಿಮಲೆ ಯಾತ್ರೆಯ ಸಮಯದಲ್ಲಿ ಜನಸಂದಣಿಯಲ್ಲಿ ಮಕ್ಕಳು ದಾರಿ ತಪ್ಪುವುದನ್ನು ತಡೆಯಲು ಪೊಲೀಸರು ಸುರಕ್ಷತಾ ತೋಳುಪಟ್ಟಿಯನ್ನು ಪರಿಚಯಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೆ ಪಂಪಾದಲ್ಲಿ ಮಗುವಿನ ಹೆಸರು ಮತ್ತು ಜೊತೆಯಲ್ಲಿರುವ ಪೋಷಕರ ಮೊಬೈಲ್ ಸಂಖ್ಯೆಯನ್ನು ಮುದ್ರಿಸಲಾದ ತೋಳುಪಟ್ಟಿಯನ್ನು ನೀಡಲಾಗುತ್ತದೆ.
ಈ ಪಟ್ಟಿ ಮಗುವಿನ ವಿವರಗಳನ್ನು ಹೊಂದಿರುವ ಕ್ಯೂಆರ್ ಕೋಡ್ ಅನ್ನು ಸಹ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಜನಸಂದಣಿಯಲ್ಲಿ ಮಗು ಬೇರ್ಪಟ್ಟರೆ ಪೋಷಕರನ್ನು ತ್ವರಿತವಾಗಿ ಪತ್ತೆಹಚ್ಚಲು ಪೊಲೀಸರಿಗೆ ಸುರಕ್ಷತಾ ತೋಳುಪಟ್ಟಿ ಸಹಾಯ ಮಾಡುತ್ತದೆ. ಪಟ್ಟಿಯಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಇತರ ಯಾತ್ರಿಕರು ದಾರಿ ತಪ್ಪಿದ ಮಕ್ಕಳಿಗೆ ಸಹಾಯ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಯಾತ್ರೆ ಮುಗಿದು ಮಗು ಸುರಕ್ಷಿತವಾಗಿ ವಾಹನಕ್ಕೆ ಮರಳುವವರೆಗೆ ತೋಳಿನ ಪಟ್ಟಿ ತೆಗೆಯದಂತೆ ಪೋಷಕರನ್ನು ಪೊಲೀಸ್ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ನವೆಂಬರ್ 16ರಂದು ಆರಂಭವಾದ 'ಮಂಡಲ-ಮಕರವಿಳಕ್ಕು' ಋತುವು ಮುಂದಿನ ವರ್ಷ ಜನವರಿಯಲ್ಲಿ ಕೊನೆಗೊಳ್ಳುತ್ತದೆ.
ಮಕ್ಕಳು ಸೇರಿದಂತೆ ಸರಾಸರಿ 70,000ಕ್ಕೂ ಹೆಚ್ಚು ಯಾತ್ರಿಕರು ಪ್ರತಿದಿನ ಬೆಟ್ಟದ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.