ಹೆಲಿಕಾಪ್ಟರ್ ಅನ್ನು ತಳ್ಳುತ್ತಿರುವ ಸಿಬ್ಬಂದಿ
- ಎಕ್ಸ್ ಚಿತ್ರ
ಪತ್ತನಂತಿಟ್ಟ: ಶಬರಿಮಲೆಯ ಅಯ್ಯಪ್ಪ ದೇಗುಲ ದರ್ಶನಕ್ಕೆ ಬಂದಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ನ ಚಕ್ರಗಳು ಹೊಸದಾಗಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ನಲ್ಲಿ ಹೂತು ಹೋಗಿರುವ ಘಟನೆ ಇಲ್ಲಿನ ಪ್ರಮಾದಂನಲ್ಲಿರುವ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ.
ಬುಧವಾರ ಬೆಳಿಗ್ಗೆ ಅವರಿದ್ದ ಹೆಲಿಕಾಪ್ಟರ್ ನೂತನವಾಗಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗಿತ್ತು.
ಪಂಪಾಗೆ ರಸ್ತೆ ಮಾರ್ಗ ಮೂಲಕ ರಾಷ್ಟ್ರಪತಿ ತೆರಳಿದ ಬಳಿಕ, ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಹೆಲಿಕಾಪ್ಟರ್ ಅನ್ನು ತಳ್ಳುವ ದೃಶ್ಯಗಳು ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾದವು.
ರಾಷ್ಟ್ರಪತಿಯವರ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಸ್ಟೇಡಿಯಂ ಅನ್ನು ಕೊನೆಯ ಕ್ಷಣದಲ್ಲಿ ಗೊತ್ತುಪಡಿಸಲಾಗಿತ್ತು. ಹೀಗಾಗಿ ಮಂಗಳವಾರ ಕಾಂಕ್ರಿಟ್ ಬಳಸಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲು ಪಂಪಾ ಸಮೀಪದ ನೀಲಕ್ಕಲ್ ನಲ್ಲಿ ಲ್ಯಾಂಡಿಂಗ್ ಮಾಡುವುದಾಗಿ ನಿಶ್ಚಯಿಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣ ಸ್ಥಳ ಬದಲಿಸಲಾಗಿತ್ತು.
ಕಾಂಕ್ರಿಟ್ ಸರಿಯಾಗಿ ಗಟ್ಟಿಯಾಗಿರದಿದ್ದರಿಂದ ಹೆಲಿಕಾಪ್ಟರ್ ನ ಭಾರ ತಾಳಲಾಗದೆ ಚಕ್ರಗಳು ಹೂತು ಹೋದವು ಎಂದು ಅಧಿಕಾರಿ ತಿಳಿಸಿದ್ದಾರೆ.
ನಾಲ್ಕು ದಿನಗಳ ಕೇರಳ ಪ್ರವಾಸಕ್ಕೆ ಬಂದಿರುವ ಅವರು, ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇಗುಲವನ್ನು ಸಂದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.