ADVERTISEMENT

ಶಬರಿಮಲೆ: ಜಾಮೀನು ಪಡೆದು ಬಂಧಮುಕ್ತವಾಗಲು ₹10,000 ದಿಂದ ₹13ಲಕ್ಷ ದಂಡ ?

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 13:55 IST
Last Updated 26 ಅಕ್ಟೋಬರ್ 2018, 13:55 IST
   

ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರಪ್ರವೇಶವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಸಂಘರ್ಷಕ್ಕೆ ಕಾರಣರಾಗಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರೆ ಜಾಮೀನು ಪಡೆಯುವುದು ಕೂಡಾ ಕಷ್ಟವಾಗಲಿದೆ.ಪ್ರತಿಭಟನೆ ವೇಳೆ ಕೆಲವರು ಪೊಲೀಸ್ ವಾಹನ, ಕೆಎಸ್‌‍ಆರ್‌ಟಿಸಿ ವಾಹನಗಳನ್ನು ಹಾನಿಮಾಡಿದ್ದರು. ಇಂಥಾ ಪ್ರಕರಣದಲ್ಲಿ ಬಂಧಿಯಾದವರು ಜಾಮೀನು ಪಡೆದು ಬಂಧಮುಕ್ತವಾಗಬೇಕಾದರೆ ₹10,000 ದಿಂದ ₹13ಲಕ್ಷದ ವರೆಗೆ ದಂಡ ಪಾವತಿಸಬೇಕಾಗುತ್ತದೆ ಎಂದು ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.

ನಿಲಯ್ಕಲ್ ಸನ್ನಿಧಾನಂ ವಿಶೇಷ ಅಧಿಕಾರಿಯಾಗಿದ್ದ ಎಸ್‍ಪಿ ಅಜಿತ್ ಅವರ ವಾಹನವನ್ನು ಹಾನಿಗೊಳಿಸಿದವರು ₹13 ಲಕ್ಷ ದಂಡ ಪಾವತಿಸಬೇಕಾಗಿದೆ.ಈ ಪ್ರಕರಣದಲ್ಲಿ 9 ಮಂದಿ ಆರೋಪಿಗಳಿದ್ದಾರೆ.
ನಿಲಯ್ಕಲ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್, ಸರ್ಕಾರದ ವಾಹನಗಳು ಮತ್ತು ಮಾಧ್ಯಮದವರ ವಾಹನಗಳನ್ನು ಧ್ವಂಸ ಮಾಡಲಾಗಿತ್ತು.ಈ ಪ್ರಕರಣದಲ್ಲಿ ತಪ್ಪಿತಸ್ಥರು ₹8-₹9 ಲಕ್ಷ ದಂಡ ಪಾವತಿಸಬೇಕಾಗಿಬರುತ್ತದೆ.ಈ ದಂಡದ ಮೊತ್ತವನ್ನು ನ್ಯಾಯಾಲಯ ತೀರ್ಮಾನಿಸಲಿದೆ.

ಶಬರಿಮಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದವರ ಬಂಧನ ಕಾರ್ಯ ಮೂರನೇ ದಿನವೂ ಮುಂದುವರಿದಿದೆ.ಗುರುವಾರ ರಾತ್ರಿ ವಿವಿಧ ಜಿಲ್ಲೆಗಳಿಂದ700ಕ್ಕಿಂತಲೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. 425 ಪ್ರಕರಣಗಳಲ್ಲಿ ಇಲ್ಲಿಯವರೆಗೆ ಬಂಧಿತರಾದವರ ಸಂಖ್ಯೆ2061 ಆಗಿದೆ. ಇನ್ನಷ್ಟು ಜನರನ್ನು ಬಂಧಿಸಲು ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.
ಬಂಧಿತರಾಗಿದ್ದ 1500ರಷ್ಟು ಮಂದಿಗೆ ಜಾಮೀನು ಲಭಿಸಿದೆ.ಆದರೆ ನಿಲಯ್ಕಲ್ ಹಿಂಸಾಚಾರದಲ್ಲಿ ಭಾಗಿಯಾದವರಿಗೆ ಮತ್ತು ವಾಹನಗಳನ್ನು ಹಾನಿ ಮಾಡಿದ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯದ ಮೂಲಕವೇ ಜಾಮೀನು ಲಭಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.