ಲಖನೌ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿಬಿಜೆಪಿ ಪಾಲಿಗೆ ಸವಾಲಾಗಿರುವಸಮಾಜವಾದಿ ಪಕ್ಷದ(ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಕೇಸರಿ ಪಕ್ಷದ (ಬಿಜೆಪಿ) ವಿರುದ್ಧ ಹೊಸ ಘೋಷಣೆಯೊಂದಿಗೆ ವಾಗ್ದಾಳಿ ನಡೆಸಿದ್ದಾರೆ.
ಫತೇಪುರ ಮತ್ತು ರಾಯ್ಬರೇಲಿಯಲ್ಲಿ ನಡೆದ ಚುನಾವಣಾ ಸಭೆಗಳನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್, ಎರಡು ಹಂತಗಳ ಮತದಾನದ ಬಳಿಕ ಬಿಜೆಪಿ ನಾಯಕರ ಭಾಷೆ ಬದಲಾಗಿದೆ ಎಂದಿದ್ದಾರೆ.
ಎಸ್ಪಿ ನೇತೃತ್ವದ ಮೈತ್ರಿಕೂಟ ಬಹುಮತ ಸಾಧಿಸಲಿದ್ದು, ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, 'ಮೂರನೇ ಹಂತದಲ್ಲಿ ಖಾತೆ ತೆರೆಯುವುದಕ್ಕೂ ಬಿಜೆಪಿಗೆ ಸಾಧ್ಯವಾಗುವುದಿಲ್ಲ. ಆ ಪಕ್ಷವುಮೊದಲ ಹಂತದಲ್ಲಿ ಸ್ತಬ್ಧವಾಗಿತ್ತು. ಎರಡನೇ ಹಂತದಲ್ಲಿ ಮೌನವಾಗಿದೆ ಮತ್ತು ಮೂರನೇ ಹಂತದಲ್ಲಿ ಶೂನ್ಯವಾಗಲಿದೆ' ಎಂದು ವ್ಯಂಗ್ಯವಾಡಿದ್ದಾರೆ.
ಬೆಲೆ ಏರಿಕೆ ಮತ್ತು ನಿರುದ್ಯೋಗ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಕೇಂದ್ರ ಮತ್ತು ರಾಜ್ಯದಲ್ಲಿರುವ ಕೇಸರಿ ಪಕ್ಷವು ರೈತರನ್ನು ವೈರಿಗಳಂತೆ ಕಾಣುತ್ತಿದೆ. ಸಮಾಜದ ಯಾವುದೇ ವರ್ಗದ ಜನ ಸಂತಸದಿಂದ ಇಲ್ಲ. ರಾಜ್ಯದ ಜನರು ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದ್ದಾರೆ.
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಎರಡು ಹಂತಗಳ ಮತದಾನ ಮುಗಿದಿದೆ. ಮೂರನೇ ಹಂತದಲ್ಲಿ 16 ಜಿಲ್ಲೆಗಳಲ್ಲಿ ಫೆ.16ರಂದು ಮತದಾನ ನಡೆಯಲಿದೆ.
ಮುಂದುವರಿದು, 'ಬಿಎಸ್ಪಿ ಮತ್ತು ಕಾಂಗ್ರೆಸ್ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ,ದಯವಿಟ್ಟು ನಿಮ್ಮ ಮತಗಳನ್ನು ಅವರಿಗೆ ನೀಡಿ ವ್ಯರ್ಥ ಮಾಡಬೇಡಿ' ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.