ADVERTISEMENT

ಗಂಗೆ ನಿಮ್ಮ ಪಾದ ತೊಳೆಯಲು ಬಂದಿದ್ದಾಳೆ: ಪ್ರವಾಹ ಪೀಡಿತರಿಗೆ ಸಚಿವ ಹೇಳಿದ ಮಾತು

ಕಾನ್ಪುರ: ಪ್ರವಾಹ ಪೀಡಿತರಿಗೆ ಸಚಿವ ನಿಶಾದ್‌ ಹೇಳಿದ ಮಾತು; ಮಾತೆಯ ದರ್ಶನದಿಂದ ಜನರು ಸ್ವರ್ಗಕ್ಕೆ ಹೋಗುವರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 14:35 IST
Last Updated 5 ಆಗಸ್ಟ್ 2025, 14:35 IST
ಸಂಜಯ ನಿಶಾದ್
ಸಂಜಯ ನಿಶಾದ್   

ಲಖನೌ: ‘ಗಂಗಾ ಮಾತೆ ನಿಮ್ಮ ಪಾದ ತೊಳೆಯಲೆಂದೇ ಬಂದಿದ್ದಾಳೆ. ಮಾತೆಯ ದರ್ಶನ ಮಾತ್ರದಿಂದ ನೀವು ನೇರವಾಗಿ ಸ್ವರ್ಗಕ್ಕೆ ಹೋಗುವಿರಿ. ಆದರೆ, ವಿರೋಧ ಪಕ್ಷಗಳ ನಾಯಕರು ನಿಮಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ...’

ಉತ್ತರ ಪ್ರದೇಶ ಸಚಿವ ಸಂಜಯ ನಿಶಾದ್‌ ಅವರು, ಕಾನ್ಪುರ ಗ್ರಾಮಾಂತರ ಜಿಲ್ಲೆಯ ಭೋಗಿನಿಪುರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಹೇಳಿರುವ ಮಾತುಗಳಿವು.

‘ಪ್ರವಾಹದಿಂದಾಗಿ ನಮ್ಮ ಮನೆಗಳು ನಾಶವಾಗಿವೆ. ಎಲ್ಲಿಗೆ ಹೋಗಬೇಕು ಎಂಬುದು ತಿಳಿಯದೆ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ದೂರಿದ ಸಂತ್ರಸ್ತರನ್ನು ಉದ್ದೇಶಿಸಿ ಅವರು ಈ ಮಾತು ಹೇಳಿದ್ದಾರೆ.

ADVERTISEMENT

‘ಗಂಗಾ ಮಾತೆ ತನ್ನ ಪುತ್ರರ ಪಾದಗಳನ್ನು ತೊಳೆಯುವುದಕ್ಕಾಗಿ ಬರುತ್ತಾಳೆ. ಆಕೆಯ ದರ್ಶನದಿಂದ ಪುತ್ರರೆಲ್ಲಾ ಸ್ವರ್ಗಕ್ಕೆ ಹೋಗುತ್ತಾರೆ’ ಎಂದೂ ಸಚಿವ ನಿಶಾದ್‌ ಹೇಳಿದ್ದಾರೆ.

ಸಚಿವರ ಈ ಮಾತುಗಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.

ಸಂಜಯ ಅವರು ನಿಶಾದ್‌ ಪಕ್ಷದ ಅಧ್ಯಕ್ಷ. ಈ ಪಕ್ಷ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವೂ ಆಗಿದೆ. ನಂತರ ಅವರು ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು.

ಸಚಿವರ ಮಾತುಗಳಿಂದ ಪ್ರವಾಹಪೀಡಿತ ಜನರು ಅಚ್ಚರಿಗೊಳಗಾಗಿದರು. ‘ತಾವು ಭೇಟಿ ನೀಡಿದ್ದ ಗ್ರಾಮಗಳು ಗಂಗಾ ನದಿ ತೀರದಲ್ಲಿ ಅಲ್ಲ, ಯಮುನಾ ನದಿ ತೀರದಲ್ಲಿನವು ಎಂಬ ಬಗ್ಗೆ ಸಚಿವರಿಗೆ ಮಾಹಿತಿ ಇರಲಿಲ್ಲ’ ಎಂದು ಗ್ರಾಮಸ್ಥರು ನಂತರ ಹೇಳಿದ್ದಾರೆ.

ಭಾರಿ ಮಳೆ: 17 ಜಿಲ್ಲೆಗಳ 402 ಗ್ರಾಮಗಳು ಪ್ರವಾಹ ಪೀಡಿತ ಗಂಗಾ, ಯಮುನಾ ಸೇರಿ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.