ADVERTISEMENT

ಕೇಂದ್ರದ ವಿರುದ್ಧ ಹೇಳಿಕೆ: ರಾಹುಲ್ ಗಾಂಧಿಗೆ ಶಿವಸೇನಾ ನಾಯಕ ಸಂಜಯ್ ರಾವುತ್ ಬೆಂಬಲ

ಪಿಟಿಐ
Published 21 ಮೇ 2022, 11:29 IST
Last Updated 21 ಮೇ 2022, 11:29 IST
ರಾಹುಲ್ ಗಾಂಧಿ ಮತ್ತು ಸಂಜಯ್ ರಾವುತ್ (ಪಿಟಿಐ ಚಿತ್ರ)
ರಾಹುಲ್ ಗಾಂಧಿ ಮತ್ತು ಸಂಜಯ್ ರಾವುತ್ (ಪಿಟಿಐ ಚಿತ್ರ)   

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋದಿ ಸರ್ಕಾರದ ವಿರುದ್ಧ ನೀಡಿರುವ ‘ಸೀಮೆಎಣ್ಣೆ’ ಹೇಳಿಕೆಗೆ ಶಿವಸೇನಾ ನಾಯಕ ಸಂಜಯ್ ರಾವುತ್ ಬೆಂಬಲ ಸೂಚಿಸಿದ್ದಾರೆ.

‘ನಮ್ಮ ಪಕ್ಷವೂ ಇದೇ ವಿಚಾರವನ್ನು ಹಲವು ಬಾರಿ ಹೇಳಿತ್ತು. ಆದರೆ ಬೇರೆ ರೀತಿಯಲ್ಲಿ ಹೇಳಿತ್ತು ಅಷ್ಟೆ’ ಎಂದು ರಾವುತ್ ಹೇಳಿದ್ದಾರೆ.

ಲಂಡನ್‌ನಲ್ಲಿ ಶುಕ್ರವಾರ ಮಾತನಾಡಿದ್ದ ರಾಹುಲ್ ಗಾಂಧಿ, ‘ಬಿಜೆಪಿ ದೇಶದೆಲ್ಲೆಡೆ ಸೀಮೆಎಣ್ಣೆ ಹರಡಿದೆ. ಒಂದು ಕಿಡಿಯಷ್ಟೇ ಬೇಕಾಗಿರುವುದು, ನಾವು ದೊಡ್ಡ ಸಮಸ್ಯೆಗೆ ಸಿಲುಕಲಿದ್ದೇವೆ’ ಎಂದು ಹೇಳಿದ್ದರು.

ADVERTISEMENT

ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವುತ್, ನಾವೂ ಸಹ ಇದನ್ನು ಹಲವು ಬಾರಿ ಬೇರೆ ರೀತಿಯಲ್ಲಿ ಹೇಳಿದ್ದೇವೆ ಎಂದಿದ್ದಾರೆ.

‘ತನಿಖಾ ಸಂಸ್ಥೆಗಳ ನೆರವಿನಿಂದ ದೇಶದ ಪ್ರಜಾಪ್ರಭುತ್ವದ ಕತ್ತು ಹಿಸುಕಲಾಗುತ್ತಿದೆ’ ಎಂದೂ ಅವರು ಟೀಕಿಸಿದ್ದಾರೆ.

‘ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವವರ ದನಿಯನ್ನು ಹತ್ತಿಕ್ಕುವ ಅಭಿಯಾನವೇ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ’ ಎಂದು ರಾವುತ್ ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ದೇಶದ ಜನ ಹೆದರಿದ್ದಾರೆ. ಸತ್ಯವನ್ನು ಹೇಳಲು ಸಿದ್ಧರಿಲ್ಲ. ಯಾರಾದರೂ ಕೇಂದ್ರದ ವಿರುದ್ಧ ಮಾತನಾಡಿದರೆ ಅವರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಸರಣಿ ತನಿಖೆಗಳನ್ನು ನಡೆಸಲಾಗುತ್ತಿದೆ’ ಎಂದು ಅವರು ದೂರಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದ್ವೇಷದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶಕ್ಕೆ ಹಾನಿ ಉಂಟುಮಾಡುತ್ತಿದ್ದಾರೆ. ವಿದೇಶದಲ್ಲಿದ್ದುಕೊಂಡು ಕೆಲವು ಹೇಳಿಕೆಗಳನ್ನು ನೀಡುವ ಮೂಲಕ ಅವರು ದೇಶಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.