ADVERTISEMENT

ರಾಜಕೀಯವೇ ಧಾರ್ಮಿಕ ಸಮಸ್ಯೆ ಸೃಷ್ಟಿಸಿದರೆ, ಆ ದೇಶ ಅನರ್ಹರ ಕೈಯಲ್ಲಿರಲಿದೆ: ರಾವುತ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 13:17 IST
Last Updated 23 ಡಿಸೆಂಬರ್ 2019, 13:17 IST
ಸಂಜಯ್ ರಾವುತ್
ಸಂಜಯ್ ರಾವುತ್   

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಶಿವಸೇನಾ ಸಂಸದ ಸಂಜಯ್ ರಾವುತ್, ಅಮೆರಿಕ ನಾಯಕ ಮಾರ್ಟಿನ್‌ ಲೂಥರ್‌ ಮಾತುಗಳನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

‘ಎಲ್ಲಿ ಧಾರ್ಮಿಕ ಸಮಸ್ಯೆಗಳನ್ನು ರಾಜಕೀಯವಾಗಿ ಪರಿಹರಿಸಲಾಗುತ್ತದೆಯೊ ಆ ದೇಶ ಉತ್ತಮ ಎನಿಸಿಕೊಳ್ಳುತ್ತದೆ. ಆದರೆ, ಎಲ್ಲಿ ರಾಜಕೀಯವೇ ಧಾರ್ಮಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆಯೊ, ಅಂತಹ ಕಡೆ ಅನರ್ಹರ ಹಿಡಿತದಲ್ಲಿ ದೇಶ ಸಾಗುತ್ತಿದೆ ಎಂದು ನಾವೆಲ್ಲ ತಿಳಿಯಬೇಕು’ ಎಂದು ಮಾರ್ಟಿನ್‌ ಲೂಥರ್‌ ಅವರ ಮಾತುಗಳನ್ನು ಉಲ್ಲೇಖಿಸಿ ರಾವುತ್ ಟ್ವೀಟ್‌ ಮಾಡಿದ್ದಾರೆ. ಯಾವ ವಿಷಯದ ಕುರಿತು ಈ ಮಾತುಗಳನ್ನು ಆಡಿದ್ದಾರೆ ಎನ್ನುವುದನ್ನು ನಿರ್ಧಿಷ್ಟವಾಗಿ ತಿಳಿಸಿಲ್ಲ.

ಜಾರ್ಖಂಡ್‌ ಫಲಿತಾಂಶದ ಕುರಿತು ಮಾತನಾಡಿರುವ ರಾವುತ್, ‘ಪೌರತ್ವ ತಿದ್ದುಪಡಿ ಕಾಯ್ದೆ ಬಿಜೆಪಿಗೆ ಲಾಭವಾಗಲಿಲ್ಲ. ಬದಲಿಗೆ ಮತ್ತೊಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿ ಜಾರ್ಖಂಡ್‌ನಲ್ಲಿ 5 ವರ್ಷ ಆಡಳಿತ ನಡೆಸಿದೆ. ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ತಮ್ಮ ಎಲ್ಲಾ ಬಲವನ್ನು ಬಳಸಿ ಪ್ರಚಾರ ನಡೆಸಿದ್ದರು. ಮೋದಿ ಅವರ ಹೆಸರಿನಲ್ಲಿ ಮತ ಕೇಳಿದ್ದರು. ಹೊಸ ಕಾಯ್ದೆಯ ನಂತರ ದೇಶದಲ್ಲಿ ಸೃಷ್ಟಿಯಾದ ಪರಿಸ್ಥಿತಿ ಜಾರ್ಖಂಡ್‌ನಲ್ಲಿ ಬಿಜೆಪಿಗೆ ಯಾವುದೇ ಲಾಭವನ್ನು ತಂದುಕೊಡಲಿಲ್ಲ. ಮಹಾರಾಷ್ಟ್ರದ ನಂತರ ಬಿಜೆಪಿ ಮತ್ತೊಂದು ರಾಜ್ಯವನ್ನು ಕಳೆದುಕೊಂಡಿದೆ’ ಎಂದು ರಾವುತ್‌ ತಿಳಿಸಿದರು.

‘ಮಹಾರಾಷ್ಟ್ರದ ನಂತರ ಜಾರ್ಖಂಡ್‌ ಅಲ್ಲಿಯೂ ಬಿಜೆಪಿ ಪ್ರಮುಖ ಮೈತ್ರಿ ಪಕ್ಷವಾದ ಎಜೆಎಸ್‌ಯುವನ್ನು ಕಳೆದುಕೊಂಡಿದೆ. ಈ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.