ADVERTISEMENT

ಆಫ್ರಿಕಾ‌ ಚೀತಾ ತರಲು ಸುಪ್ರೀಂ ಕೋರ್ಟ್‌ ಅಸ್ತು

ಪಿಟಿಐ
Published 29 ಜನವರಿ 2020, 3:41 IST
Last Updated 29 ಜನವರಿ 2020, 3:41 IST
ಚೀತಾ
ಚೀತಾ   

ನವದೆಹಲಿ: ಆಫ್ರಿಕಾ ಚೀತಾವನ್ನು ಕರೆತರಲು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದ್ದು, ಭಾರತದಲ್ಲಿ ಸೂಕ್ತ ಎನಿಸುವ ಎಚ್ಚರಿಕೆಯಿಂದ ಆಯ್ಕೆ ಮಾಡಿದ ವನ್ಯಜೀವಿ ತಾಣದಲ್ಲಿ ಬಿಡಬೇಕು ಎಂದು ಸೂಚಿಸಿದೆ.

ಭಾರತದಲ್ಲಿ ಚೀತಾ ಸಂತತಿಯು ಕಣ್ಮರೆಯಾಗಿದೆ ಎಂಬ ಕಾರಣವನ್ನು ನೀಡಿದ್ದರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಆಫ್ರಿಕಾದ ಚೀತಾ ತರಲು ಯೋಜನೆಗೆ ಅನುಮತಿಯನ್ನು ಕೋರಿ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಆದೇಶ ನೀಡಿತು.

ಈ ಬಗ್ಗೆ ಎನ್‌ಟಿಸಿಎಗೆ ಅಗತ್ಯ ಮಾರ್ಗದರ್ಶನ ನೀಡಲು ಭಾರತೀಯ ವನ್ಯಜೀವಿ ಮಂಡಳಿಯ ಮಾಜಿ ನಿರ್ದೇಶಕ ರಂಜಿತ್ ಸಿಂಗ್, ಪ್ರಧಾನ ನಿರ್ದೇಶಕ ಧನಂಜಯ ಮೋಹನ್‌, ಕೇಂದ್ರ ಅರಣ್ಯ ಸಚಿವಾಲಯದ ಡಿಐಜಿ ಒಳಗೊಂಡ ತ್ರಿಸದಸ್ಯ ಸಮಿತಿಯನ್ನೂ ಕೋರ್ಟ್‌ ರಚಿಸಿತು.

ADVERTISEMENT

ಸಮಿತಿಯು ಪ್ರತಿ ನಾಲ್ಕು ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕು. ಕೋರ್ಟ್‌ ಈ ಯೋಜನೆಯ ಮೇಲೆ ನಿಗಾ ಇರಿಸಲಿದೆ ಎಂದು ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ತ್ರಿಸದಸ್ಯರ ನ್ಯಾಯಪೀಠ ತಿಳಿಸಿತು.

ಇರಾನ್‌ನ ತೆಹರಾನ್‌ನಲ್ಲಿರುವ ಪರ್ಡಿಸನ್ ಉದ್ಯಾನದಲ್ಲಿ ವಿಹರಿಸುತ್ತಿರುವ ಚೀತಾ

‘ಆಫ್ರಿಕಾ ಚೀತಾ ಪರಿಚಯಿಸುವುದನ್ನು ಎನ್‌ಟಿಸಿಎ ವಿವೇಚನೆಗೇ ಬಿಡುವುದು ಸರಿಯಲ್ಲ. ಅದರ ಮೇಲ್ವಿಚಾರಣೆಯನ್ನು ಪರಿಣತರ ಸಮಿತಿಯು ಮಾಡಬೇಕು. ಸಮಿತಿಯು ದೇಶದಲ್ಲಿ ಚೀತಾ ಬಿಡಲು ಸೂಕ್ತ ಎನಿಸುವ ತಾಣವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು’ ಎಂದು ಪೀಠ ಸ್ಪಷ್ಟಪಡಿಸಿತು.

ಇದೇ ಸಂದರ್ಭದಲ್ಲಿ ರಂಜಿತ್‌ ಸಿಂಗ್ ಅವರು, ಆಫ್ರಿಕಾದ ಚೀತಾ ಕರೆತರುವ ಕ್ರಮ ದೇಶದಲ್ಲಿ ಜೀವವೈವಿಧ್ಯದಲ್ಲಿ ಭಾರಿ ಬದಲಾವಣೆ ತರಲಿದೆ. ಪ್ರವಾಸೋದ್ಯಮಕ್ಕೂ ನೆರವಾಗಲಿದೆ ಎಂದು ಪ್ರತಿಪಾದಿಸಿದ್ದರು. ಚೀತಾ ತರುವುದನ್ನು ನಿಷೇಧಿಸಿ ಈ ಹಿಂದೆ 2013ರಲ್ಲಿ ನೀಡಿದ್ದ ಆದೇಶವನ್ನು ಕೋರ್ಟ್‌ ಪರಿಷ್ಕರಿಸಿತು.

ಭಾರತದಲ್ಲಿ ಈ ಹಿಂದೆ 1947ರಲ್ಲಿ ಚೀತಾ ಕಡೆಯ ಬಾರಿಗೆ ಕಾಣಿಸಿಕೊಂಡಿತ್ತು. ದೇಶದಲ್ಲಿ ಚೀತಾ ಸಂತತಿಯು ಗತಿಸಿದೆ ಎಂದು 1952ರಲ್ಲಿ ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.