ADVERTISEMENT

ಮಕ್ಕಳ ಕಣ್ಮರೆ ಹಿಂದೆ ಯಾವುದಾದರೂ ಗುಂಪಿನ ಕೈವಾಡವಿದೆಯೇ?: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 15:42 IST
Last Updated 10 ಫೆಬ್ರುವರಿ 2026, 15:42 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮಕ್ಕಳ ಕಣ್ಮರೆ ಹಿಂದೆ ರಾಜ್ಯದಲ್ಲಿರುವ ನಿರ್ದಿಷ್ಟ ಗುಂಪು ಅಥವಾ ರಾಷ್ಟ್ರವ್ಯಾಪಿ ಜಾಲ ಇದೆಯೇ ಎಂಬುದನ್ನು ಪತ್ತೆಹಚ್ಚಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.

ಕಣ್ಮರೆ ಹಿಂದೆ ಯಾವುದಾದರೂ ಮಾದರಿ ಇದೆಯೇ ಅಥವಾ ಇಷ್ಟಬಂದಂತೆ ಮಾಡಲಾಗಿದೆಯೇ ಎಂಬುದರ ಕುರಿತಂತೆ ಎಲ್ಲಾ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಬೇಕು ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಉಜ್ಜಲ್‌ ಭುಯಾನ್‌ ನೇತೃತ್ವದ ನ್ಯಾಯಪೀಠ ತಿಳಿಸಿದೆ.

‘ಮಕ್ಕಳ ಕಣ್ಮರೆ ಕುರಿತಂತೆ ಕೆಲವು ರಾಜ್ಯಗಳು ಮಾಹಿತಿ ನೀಡಿವೆ. ಡಜನ್‌ಗೂ ಅಧಿಕ ರಾಜ್ಯಗಳು ದತ್ತಾಂಶಗಳನ್ನೇ ನೀಡಿಲ್ಲ. ಎಲ್ಲಾ ದತ್ತಾಂಶಗಳು ಸಿಕ್ಕಿದ ನಂತರವೇ, ವಿಸ್ತೃತ ವಿಶ್ಲೇಷಣೆ ಮಾಡಲು ಸಾಧ್ಯ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಅವರು ನ್ಯಾಯಪೀಠದ ಗಮನಸೆಳೆದರು.

ADVERTISEMENT
‘ಇದು ಇಡೀ ದೇಶಕ್ಕೆ ಹಬ್ಬಿದ ಜಾಲವೇ ಅಥವಾ ರಾಜ್ಯದಲ್ಲಿರುವ ನಿರ್ದಿಷ್ಟ ಗುಂಪು ಇದರ ಹಿಂದೆ ಕೈವಾಡ ವಹಿಸಿದೆಯಾ ಎಂಬುದು ನಮಗೆ ತಿಳಿಯಬೇಕು’ ಎಂದು ನ್ಯಾಯಪೀಠವು ಭಾಟಿ ಅವರಿಗೆ ತಿಳಿಸಿತು. 
ಈಗಾಗಲೇ ರಕ್ಷಿಸಲ್ಪಟ್ಟ ಮಕ್ಕಳಿಂದ ಹೊಣೆಗಾರರು ಯಾರು ಎಂಬುದನ್ನು ಪತ್ತೆಹಚ್ಚಿ ಎಂದು ಭಾಟಿ ಅವರಿಗೆ ನ್ಯಾಯಪೀಠ ಸಲಹೆ ನೀಡಿತು.
‘ಗಂಭೀರ ಸಮಸ್ಯೆ ಇರುವ ರಾಜ್ಯಗಳೇ ಸರಿಯಾದ ದತ್ತಾಂಶ ಒದಗಿಸಿಲ್ಲ. ಅಗತ್ಯಬಿದ್ದರೆ ಕಠಿಣ ಆದೇಶ ಹೊರಡಿಸಲಾಗುವುದು’ ಎಂದು ನ್ಯಾಯಪೀಠ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.  
‘ಕೇಂದ್ರ ಸರ್ಕಾರವೇ ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ರಾಜ್ಯ ಸರ್ಕಾರದಿಂದ ದತ್ತಾಂಶ ಸಂಗ್ರಹಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಹಿರಿಯ ವಕೀಲ ಅಪರ್ಣಾ ಭಟ್‌ ಅವರು ಸಲಹೆ ನೀಡಿದರು.
ದೇಶದ ಹಲವು ರಾಜ್ಯಗಳಲ್ಲಿ ಕಣ್ಮರೆಯಾಗಿರುವ ಮಕ್ಕಳು ಇನ್ನೂ ಕೂಡ ಪತ್ತೆಯಾಗಿಲ್ಲ, ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಕ್ಕಳ ವೇಶ್ಯಾವಾಟಿಕೆ ವಿರುದ್ಧ ಹೋರಾಟ ನಡೆಸುತ್ತಿರುವ ಸ್ವಯಂಸೇವಾ ಸಂಸ್ಥೆ ‘ಗುರಿಯಾ ಸ್ವಯಂ ಸೇವಿ ಸಂಸ್ಥಾನ್‌’ ಸಂಸ್ಥೆಯು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.