ನವದೆಹಲಿ: ವೈದ್ಯಕೀಯ ಕಾಲೇಜಿಗೆ ಹಿಂಬಾಗಿಲಿನಿಂದ ಪ್ರವೇಶ ಪಡೆದವರಿಗೆ ಅನುಕಂಪ ತೋರಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕಳೆದ ವರ್ಷ ಜುಲೈ 20ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮರುಪರಿಶೀಲಿಸುವಂತೆ, ಗ್ಲೋಕಲ್ ವೈದ್ಯಕೀಯ ಕಾಲೇಜು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.
ಉತ್ತರ ಪ್ರದೇಶ ಸರ್ಕಾರವು ಸಾಮಾನ್ಯ ಕೌನ್ಸೆಲಿಂಗ್ಗೆ ಅಧಿಸೂಚನೆ ಹೊರಡಿಸಿದರೂ ಖಾಸಗಿ ಕೌನ್ಸೆಲಿಂಗ್ ಮೂಲಕ 67 ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ ಪ್ರವೇಶ ಪಡೆದಿದ್ದರು. ಆ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ರದ್ದುಗೊಳಿಸಿದ್ದ ಭಾರತೀಯ ವೈದ್ಯಕೀಯ ಪರಿಷತ್ತಿನ (ಎಂಸಿಐ) ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.
ಕಾಲೇಜಿನ ಮೂಲಕ ನಡೆದ ಖಾಸಗಿ ಕೌನ್ಸೆಲಿಂಗ್ಗೆ ಮಾನ್ಯತೆ ಇಲ್ಲ ಎಂಬುದರ ಅರಿವಿದ್ದೂ ಈ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ ಸೇರಿದ್ದು, ಹಿಂಬಾಗಿನಿಂದ ಪ್ರವೇಶ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಂಸಿಐ ಹಾಗೂ ಉತ್ತರಪ್ರದೇಶ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.ಅವರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರಾವ್, ಬಿ.ಆರ್.ಗವಾಯಿ ಹಾಘೂ ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠವು, ‘ಕಾನೂನು ಬಾಹಿರ ಕ್ರಮ ಎಂದು ಗೊತ್ತಿದ್ದರೂ, ಎಂಸಿಐ ಪ್ರವೇಶಾತಿ ಅನೂರ್ಜಿತಗೊಳಿಸಿದ ಮೇಲೂ ಈ ವಿದ್ಯಾರ್ಥಿಗಳು ಮೊದಲೆರಡು ವರ್ಷದ ಪರೀಕ್ಷೆ ಹೇಗೆ ಬರೆದರು?’ ಎಂದು ಅಚ್ಚರಿ ವ್ಯಕ್ತಪಡಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.