ನವದೆಹಲಿ: ಹಾಥರಸ್ನ ದಲಿತ ಮಹಿಳೆಯ ಅತ್ಯಾಚಾರ ಹಾಗೂ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಸಾಕ್ಷಿಗಳನ್ನು ರಕ್ಷಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಕ್ಟೋಬರ್ 8ರೊಳಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಉತ್ತರ ಪ್ರದೇಶ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಮುಂದಾನಂತರ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಹಾಥರಸ್ ಘಟನೆಯನ್ನು ಭಯಾನಕ ಮತ್ತು ಅಸಾಧಾರಣ ಪ್ರಕರಣವೆಂದು ಹೇಳಿದ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠ, ತನಿಖೆ ಸುಗಮವಾಗಿ ನಡೆಯುವುದನ್ನು ನ್ಯಾಯಾಲಯ ಖಚಿತಪಡಿಸುತ್ತದೆ ಎಂದು ಹೇಳಿದರು.
ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಹಾಥರಸ್ ಪ್ರಕರಣದ ಬಗ್ಗೆ ಹಲವು ರೀತಿಯಲ್ಲಿ ಸುದ್ದಿಗಳು ಹರಡಲು ಆರಂಭವಾಗಿವೆ. ಇದು ನಿಲ್ಲಬೇಕಿದೆ‘ ಎಂದು ನ್ಯಾಯಾಲಕ್ಕೆ ತಿಳಿಸಿದರು.
ಹಾಥರಸ್ ಪ್ರಕರಣದ ತನಿಖೆ ವಿಷಯದಲ್ಲಿ ಯಾವುದೇ ಹಿತಾಸಕ್ತಿ, ನಕಲಿ ಸಾಕ್ಷ್ಯಗಳು, ಸುಳ್ಳು ಹೇಳಿಕೆಗಳು ನುಸುಳಲು ಸಾಧ್ಯವಿಲ್ಲ‘ ಎಂದು ಹೇಳಿದ ಮೆಹ್ತಾ ಅವರು, ‘ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲೇ ಈ ಪ್ರಕರಣದ ತನಿಖೆ ನಡೆಸಬಹುದು ಎಂದು ಹತ್ರಾಸ್ ಪ್ರಕರಣದ ತನಿಖೆ ಸಿಬಿಐನಿಂದ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬಹುದು‘ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.