ನವದೆಹಲಿ : ಪತ್ರಕರ್ತರ ವಿರುದ್ಧದ ಆಕ್ಷೇಪಾರ್ಹ ಪೋಸ್ಟ್ಗೆ ಸಂಬಂಧಿಸಿದಂತೆ ತಮಿಳು ಚಿತ್ರನಟ, ರಾಜಕಾರಣಿ ಎಸ್.ವಿ.ಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ‘ಅವರು ಮಹಿಳೆಯರ ವಿರುದ್ಧ ಕೆಟ್ಟದಾಗಿ ಅಭಿಯಾನ ನಡೆಸಿದ್ದಾರೆ’ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್.ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ, ‘ನಟ ತನ್ನ ನಡೆಗಾಗಿ ಕ್ಷಮೆ ಕೋರಿಲ್ಲ’ ಎಂಬುದನ್ನು ಗಮನಕ್ಕೆ ತೆಗೆದುಕೊಂಡಿತು. ಪ್ರಕರಣದ ಮುಂದಿನ ವಿಚಾರಣೆಯವರೆಗೆ ಶರಣಾಗದಂತೆ ಆರೋಪಿಗೆ ವಿನಾಯಿತಿ ನೀಡಿತು.
‘ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ನೀವು ಮಹಿಳೆಯ ಘನತೆ, ವ್ಯಕ್ತಿತ್ವದ ಮೇಲೆ ನೇರವಾಗಿ, ಕಟುವಾಗಿ ಅನುಚಿತ ಕ್ರಮದಲ್ಲಿ ದಾಳಿ ನಡೆಸಿದ್ದೀರಿ’ ಎಂದು ಪೀಠವು ಕಟುವಾಗಿ ಹೇಳಿತು.
‘ಈ ನಟ ಬಹುಶಃ ಇತರೆ ಮಹಿಳೆಗೂ ಕಿರುಕುಳ ನೀಡಿರಬಹುದು. ಈ ಬಾರಿ ಪತ್ರಕರ್ತರ ಸಂಘದ ಜೊತೆಗೇ ಸಂಘರ್ಷ ನಡೆಸಿದ್ದಾರೆ’ ಎಂದು ನಟ, ರಾಜಕಾರಣಿ ಪ್ರತಿನಿಧಿಸಿದ್ದ ವಕೀಲ ಬಾಲಾಜಿ ಶ್ರೀನಿವಾಸನ್ ಅವರಿಗೆ ಪೀಠ ಹೇಳಿತು.
ಆಕ್ಷೇಪಾರ್ಹ ಪೋಸ್ಟ್ ಸಂಬಂಧ ಕೆಳಹಂತದ ಕೋರ್ಟ್ ಒಂದು ತಿಂಗಳು ಸಜೆ ವಿಧಿಸಿತ್ತು. ಮದ್ರಾಸ್ ಹೈಕೋರ್ಟ್ ಇದನ್ನು ಎತ್ತಿ ಹಿಡಿದಿತ್ತು. ಆದರೆ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿ, 90 ದಿನ ಆದೇಶ ಜಾರಿಗೆ ತಡೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.