ನವದೆಹಲಿ: ಕೋವಿಡ್-19ರಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ಮಾರ್ಗಸೂಚಿಗಳನ್ನು ಬದಲಾಯಿಸಲು ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಪ್ರಸ್ತುತ ಕೋವಿಡ್-19 ರೋಗಿಗಳಿಗೆ ಹೈಡ್ರಾಕ್ಸಿಕ್ಲೊರೊಕ್ವಿನ್ (ಎಚ್ಸಿಕ್ಯು) ಹಾಗೂ ರೋಗನಿರೋಧಕ ಅಜಿಟ್ರೊಮೈಸಿನ್ (ಎಝೆಡ್ಎಂ) ಅನ್ನು ನೀಡಲಾಗುತ್ತಿದೆ.
ಈ ಔಷಧಗಳಿಂದ ಅಡ್ಡಪರಿಣಾಮ ಉಂಟಾಗುತ್ತಿದ್ದು, ಇದರಿಂದ ಜನರು ಸಾಯುತ್ತಿದ್ದಾರೆ ಎಂದು ಎನ್ಜಿಒ ಪೀಪಲ್ ಫಾರ್ ಬೆಟರ್ ಟ್ರೀಟ್ಮೆಂಟ್ (ಪಿಬಿಟಿ) ಅರ್ಜಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಶನ್ ಕೌಲ್ ಹಾಗೂ ಬಿ.ಆರ್. ಗವಾಯಿ ಅವರ ಪೀಠ, ಈ ವಿಷಯದಲ್ಲಿ ನ್ಯಾಯಪೀಠ ತಜ್ಞಸಂಸ್ಥೆ ಅಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಈ ವಿಷಯವನ್ನು ತಿಳಿಸಬಹುದು. ಅವರು ಈ ಕುರಿತು ಪರಿಶೀಲಿಸಬಹುದು ಎಂದು ಹೇಳಿದೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಪಾಲ್ಗೊಂಡ ಪಿಬಿಟಿ ಅಧ್ಯಕ್ಷರಾಗಿರುವವೈದ್ಯ ಕುನಾಲ್ ಸಾಹಾ ಅವರು, ಕೋವಿಡ್-19 ಪಿಡುಗಿಗೆ ನೀಡುತ್ತಿರುವ ಚಿಕಿತ್ಸೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಎಚ್ಸಿಕ್ಯು ಹಾಗೂ ಎಝೆಡ್ ಔಷಧದಿಂದಾಗುವ ಅಡ್ಡಪರಿಣಾಮಗಳ ಕುರಿತು ಅಮೆರಿಕದ ಹೃದ್ರೋಗ ಸಂಸ್ಥೆ ಗಂಭೀರ ಎಚ್ಚರಿಕೆ ನೀಡಿದೆ. ಇದನ್ನು ಪರಿಗಣಿಸಬೇಕೆಂದು ಕೋರುತ್ತಿದ್ದೇನೆʼ ಎಂದಿದ್ದಾರೆ.
ಪ್ರಸ್ತುತ ಕೋವಿಡ್-19ಕ್ಕೆ ಯಾವುದೇ ಔಷಧ ಇಲ್ಲದಿರುವುದರಿಂದ, ವೈದ್ಯರು ವಿವಿಧ ಔಷಧಗಳಿಂದ ಚಿಕಿತ್ಸೆ ನೀಡಲು ಯತ್ನಿಸುತ್ತಿದ್ದಾರೆ. ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವುದು ವೈದ್ಯರ ನಿರ್ಧಾರ. ಈ ಕುರಿತು ನ್ಯಾಯಾಲಯ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.