ನವದೆಹಲಿ: ಬೆಂಗಳೂರಿನಲ್ಲಿ 65 ಕಿ.ಮೀ. ಉದ್ದದ ಎಂಟು ಪಥದ ವರ್ತುಲ ರಸ್ತೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಡೆ ನೀಡಿರುವ ವಿರುದ್ಧ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಲ್ಲಿಸಿದ ಅರ್ಜಿ ಸಂಬಂಧದ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಮತ್ತು ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ಪೀಠ ಶುಕ್ರವಾರ ವಿಚಾರಣೆ ಆಲಿಸಿತು. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ದೃಷ್ಟಿಯಿಂದ ಈ ಯೋಜನೆ ಮಹತ್ವದಾಗಿದೆ ಎಂದು ಹೇಳಿತು. ಯೋಜನೆ ಸಂಬಂಧ ಹೊಸದಾಗಿ ಪರಿಸರ ಅನುಮತಿ ಸಲ್ಲಿಸುವ ಅಗತ್ಯ ಇದ್ದರೆ ಅದರ ಬಗ್ಗೆ ತಾನು ಆದೇಶ ನೀಡುವುದಾಗಿ ಹೇಳಿತು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪರ ಹಾಜರಾಗಿದ್ದ ಹಿರಿಯ ವಕೀಲರಾದ ಶ್ಯಾಂ ದಿವಾನ್ ಮತ್ತು ಸಂಜಯ್ ಎಂ.ನುಲಿ ಅವರು ನ್ಯಾಯಮಂಡಳಿ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಪರಿಸರ ಪರಿಣಾಮದ ಕುರಿತು ಹೊಸದಾಗಿ ಅನುಮತಿ ಪಡೆಯದ ಹೊರತು ಬಳ್ಳಾರಿ ರಸ್ತೆ ಹಾಗೂಹಳೆ ಮದ್ರಾಸ್ ರಸ್ತೆ ಮೂಲಕ ಸಾಗುವ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗಿನ ಮೊದಲ ಹಂತದ ವರ್ತುಲ ರಸ್ತೆಗೆ ‘ಅನಿರ್ದಿಷ್ಟಾವಧಿ ತಡೆ’ ನೀಡಲಾಗಿದೆ ಎಂದು ಹೇಳಿದರು.ಇದರಿಂದ ಯೋಜನೆಯ ವೆಚ್ಚ ₹1,000 ಕೋಟಿಯಿಂದ ₹12,000 ಕೋಟಿ ಏರಿಕೆಯಾಗಲಿದೆ ಎಂದು ಗಮನಕ್ಕೆ ತಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.