ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್ನ ತೀರ್ಪನ್ನು ರದ್ದುಮಾಡುವಂತೆ ಪಿ. ಚಿದಂಬರಂ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.
ಚಿದಂಬರಂ ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದ ಸಿಬಿಐ ಪರ ವಕೀಲ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಆರೋಪಿಯು ಜೈಲಿನ ಹೊರಗಿದ್ದಾರೆ ಎಂಬುದೇ ಸಾಕ್ಷಿದಾರರಲ್ಲಿ ಭಯ ಮೂಡಿಸಬಲ್ಲದು. ಆದ್ದರಿಂದ ಪ್ರಕರಣದ ವಿಚಾರಣೆ ಆರಂಭವಾಗುವವರೆಗೆ ಮತ್ತು ದಾಖಲೆಗಳ ಪರಿಶೀಲನೆ ಮುಗಿಯುವವರೆಗಾದರೂ ಅವರಿಗೆ ಜಾಮೀನು ನೀಡಬಾರದು’ ಎಂದು ವಾದಿಸಿದರು.
ಆರೋಪಪಟ್ಟಿ ಸಲ್ಲಿಕೆ
ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಪಿ. ಚಿದಂಬರಂ, ಮಗ ಕಾರ್ತಿ ಹಾಗೂ ಕೆಲವು ಅಧಿಕಾರಿಗಳೂ ಸೇರಿದಂತೆ 15 ಮಂದಿಯ ವಿರುದ್ಧ ಸಿಬಿಐ ಶುಕ್ರವಾರ ದೆಹಲಿ ಹೈಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಿದೆ.
ಆರೋಪಿಗಳಲ್ಲಿ ಪೀಟರ್ ಮುಖರ್ಜಿ, ಲೆಕ್ಕ ಪರಿಶೋಧಕ ಎಸ್. ಭಾಸ್ಕರ ರಮಣ್, ನೀತಿ ಆಯೋಗದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧುಶ್ರೀ ಖುಲ್ಲರ್, ಸೂಕ್ಷ್ಮ– ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ಅನೂಪ್ ಕೆ. ಪೂಜಾರಿ, ಪ್ರಬೋಧ ಸಕ್ಸೆನಾ, ರವೀಂದ್ರಪ್ರಸಾದ್ ಮುಂತಾದವರು ಸೇರಿದ್ದಾರೆ. ಮಾಫಿಸಾಕ್ಷಿಯಾಗಿ ಪರಿವರ್ತನೆಗೊಂಡಿರುವ ಇಂದ್ರಾಣಿ ಮುಖರ್ಜಿ ಅವರ ಹೆಸರು ಅಂತಿಮ ಆರೋಪಪಟ್ಟಿಯಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.