ADVERTISEMENT

ಪತ್ರಕರ್ತ ವಿನೋದ್ ದುವಾ ವಿರುದ್ಧದ ದೇಶದ್ರೋಹ ಪ್ರಕರಣ ರದ್ದುಗೊಳಿಸಿದ ‘ಸುಪ್ರೀಂ’

ಪ್ರತಿಯೊಬ್ಬ ಪತ್ರಕರ್ತರಿಗೆ ರಕ್ಷಣೆ ಇದೆ ಎಂದ ನ್ಯಾಯಾಲಯ

ಪಿಟಿಐ
Published 3 ಜೂನ್ 2021, 8:22 IST
Last Updated 3 ಜೂನ್ 2021, 8:22 IST
ವಿನೋದ್ ದುವಾ
ವಿನೋದ್ ದುವಾ   

ನವದೆಹಲಿ: ಕಳೆದ ವರ್ಷ ತಮ್ಮ ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.

1962ರ ಕೇದಾರ್‌ನಾಥ್‌ ಸಿಂಗ್ ತೀರ್ಪು ಪ್ರತಿಯೊಬ್ಬ ಪ್ರತ್ರಕರ್ತನನ್ನೂ ಇಂತಹ ಪ್ರಕಣಗಳಿಂದ ರಕ್ಷಿಸಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ವಿನೀತ್ ಸರನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ಹೈಕೋರ್ಟ್‌ ನ್ಯಾಯಮೂರ್ತಿಗಳನ್ನೊಳಗೊಂಡ ಉನ್ನತಮಟ್ಟದ ಸಮಿತಿಯು ಅನುಮತಿ ನೀಡದ ಹೊರತು, ಹತ್ತು ವರ್ಷಗಳ ಅನುಭವವಿರುವ ಯಾವುದೇ ಪತ್ರಕರ್ತರ ವಿರುದ್ಧ ಎಫ್‌ಐಆರ್‌ ದಾಖಲಿಸಬಾರದು ಎಂಬ ದುವಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತು. ಇದು ಶಾಸಕಾಂಗದ ಅಧಿಕಾರವನ್ನು ಅತಿಕ್ರಮಿಸಿದಂತಾಗುತ್ತದೆ ಎಂದು ಹೇಳಿತು.

ADVERTISEMENT

ವಾಕ್ ಸ್ವಾತಂತ್ರ್ಯದ ರಕ್ಷಣೆ ಮತ್ತು ಮಾಧ್ಯಮ ಸಿಬ್ಬಂದಿಯ ಅಭಿವ್ಯಕ್ತಿಯ ವಿಷಯದಲ್ಲಿ, ‘ಪ್ರತಿಯೊಬ್ಬ ಪತ್ರಕರ್ತನಿಗೆ ಕೇದಾರ್ ನಾಥ್ ಸಿಂಗ್ ತೀರ್ಪಿನಡಿಯಲ್ಲಿ ರಕ್ಷಣೆ ಪಡೆಯಲು ಅರ್ಹತೆ ಇದೆ‘ (ಐಪಿಸಿಯಲ್ಲಿ ದೇಶದ್ರೋಹದ ಅಪರಾಧದ ವ್ಯಾಪ್ತಿಯ ಬಗ್ಗೆ 1962ರ ಪ್ರಸಿದ್ಧ ತೀರ್ಪು)‘ ಎಂದು ನ್ಯಾಯಾಲಯ ಹೇಳಿತು.‌

ಐಪಿಸಿಯ ಸೆಕ್ಷನ್ 124 ಎ (ದೇಶದ್ರೋಹ) ದ ಸಿಂಧುತ್ವವನ್ನು ಎತ್ತಿಹಿಡಿಯುವಾಗ, ಸರ್ಕಾರದ ಕ್ರಮಗಳನ್ನು ಟೀಕಿಸಿದ್ದಕ್ಕಾಗಿ ಪ್ರಜೆಯ ವಿರುದ್ಧ ದೇಶದ್ರೋಹದ ಆರೋಪಗಳನ್ನು ಮಾಡಲಾಗದು ಎಂದು 1962 ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಏಕೆಂದರೆ ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿರುತ್ತದೆ ಎಂದು ಹೇಳಿತ್ತು.

ಕಳೆದ ವರ್ಷ ವಿನೋದ್ ದುವಾ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ನಡೆಸಿದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಬಿಜೆಪಿಯ ಸ್ಥಳೀಯ ಮುಖಂಡರೊಬ್ಬರು ದುವಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ 6 ರಂದು ಹಿಮಾಚಲ ಪ್ರದೇಶ ಸರ್ಕಾರ ಮತ್ತು ದೂರುದಾರರ ವಾದಗಳನ್ನು ಆಲಿಸಿದ ನಂತರ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೆ ಮೊದಲು ಅಂದರೆ ಜುಲೈ 20ರಂದು ಮುಂದಿನ ನ್ಯಾಯಾಲಯದ ಆದೇಶದವರೆಗೂ ದುವಾ ಅವರನ್ನು ಬಂಧಿಸದಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.