ನವದೆಹಲಿ: ಪ್ರತಿ ಲೀಟರ್ ನೀರಿನಲ್ಲಿ ಒಟ್ಟು ಕರಗಿದ ಘನವಸ್ತುಗಳ (ಟಿಡಿಎಸ್) ಮಟ್ಟವು 500 ಮಿಲಿ ಗ್ರಾಂ ಗಿಂತ ಕಡಿಮೆಯಿದ್ದರೆ ನೀರು ಶುದ್ಧೀಕರಣವನ್ನು ನಿಷೇಧಿಸಬೇಕು ಎಂದು ಎಲ್ಲಾ ಆರ್ಒ ತಯಾರಕರಿಗೆ ನಿರ್ದೇಶನಗಳನ್ನು ನೀಡಬೇಕು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ನಿರ್ದೇಶಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಈ ಕುರಿತು 2021ರ ಡಿಸೆಂಬರ್ 1 ರಂದು ಎನ್ಜಿಟಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಭಾರತೀಯ ನೀರಿನ ಗುಣಮಟ್ಟ ಅಸೋಸಿಯೇಷನ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಎಸ್.ಎ. ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠವು ಜಲಸಂಪನ್ಮೂಲ ಸಚಿವಾಲಯ, ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ಮೂರು ತಿಂಗಳೊಳಗೆ ನೋಟಿಸ್ಗೆ ಪ್ರತಿಕ್ರಿಯೆ ನೀಡಬೇಕು. ಮುಂದಿನ ಆದೇಶದವರೆಗೆ ಇದನ್ನು ತಡೆ ಹಿಡಿಯಲಾಗುವುದು ಎಂದು ನ್ಯಾಯಪೀಠವು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.