ನವದೆಹಲಿ: ಮಹತ್ತ್ವಾಕಾಂಕ್ಷೆಯ ಕೇಂದ್ರೀಯ ವಿಸ್ತಾ ಯೋಜನೆಗೆ ಪರಿಸರ ಇಲಾಖೆಯ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಲಿದೆ.
ಕೇಂದ್ರೀಯ ವಿಸ್ತಾ ನವೀಕರಣ ಯೋಜನೆಯನ್ನು 2019 ಸೆಪ್ಟೆಂಬರ್ನಲ್ಲಿ ಘೋಷಿಸಲಾಗಿತ್ತು. ಇದರಲ್ಲಿ 900–1,200 ಸಂಸದರು ಕುಳಿತುಕೊಳ್ಳುವ ಸಾಮರ್ಥ್ಯವಿರುವ ತ್ರಿಭುಜಾಕಾರದ ನೂತನ ಸಂಸತ್ ಭವನ, ಕೇಂದ್ರೀಯ ಕಾರ್ಯದರ್ಶಿಗಳ ಕಟ್ಟಡ ಸೇರಿದಂತೆ ಹಲವು ಯೋಜನೆಗಳಿವೆ. ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಂಜೀವ್ ಖನ್ನಾ ಅವರಿದ್ದ ಪೀಠವು ಕಳೆದ ವರ್ಷ ನ.5ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಸುಪ್ರೀಂ ಕೋರ್ಟ್ ತೀರ್ಪು ಬರುವಲ್ಲಿಯವರೆಗೂ ಯಾವುದೇ ನಿರ್ಮಾಣ ಚಟುವಟಿಕೆಯನ್ನು ಆರಂಭಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ಭರವಸೆ ನೀಡಿದ ಬಳಿಕ, ಡಿ.10ರಂದು ಕೇಂದ್ರೀಯ ವಿಸ್ತಾ ಯೋಜನೆಗೆ ಅಡಿಗಲ್ಲು ಹಾಕಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ನೂತನ ಸಂಸತ್ ಭವನ ಸೇರಿದಂತೆ ಇತರೆ ಯೋಜನೆಯ ಭವಿಷ್ಯವು ತೀರ್ಪಿನ ಮೇಲೆ ನಿಂತಿದೆ ಎಂದು ಪೀಠವು ಹೇಳಿತ್ತು. ಡಿ.10ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹971 ಕೋಟಿ ವೆಚ್ಚದ ನೂತನ ಸಂಸತ್ ಭವನಕ್ಕೆ ಅಡಿಗಲ್ಲು ಹಾಕಿದ್ದರು. 2022ರೊಳಗೆ ಈ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.