ಮುಂಬೈ: ಕೋವಿಡ್–19 ಸಾಂಕ್ರಾಮಿಕ ರೋಗದ ಕಾರಣದಿಂದಮಹಾರಾಷ್ಟ್ರದಲ್ಲಿ ಒಂದೂವರೆ ವರ್ಷ ಕಾಲ ಬಂದ್ ಮಾಡಲಾಗಿದ್ದ ಶಾಲೆಗಳು ಸೋಮವಾರ ಪುನರಾರಂಭಗೊಂಡವು. ದೀರ್ಘಕಾಲ ಮೌನವಾಗಿದ್ದ ಶಾಲೆಗಳ ಗಂಟೆಗಳ ಸದ್ದು ಮೊಳಗಿತು.
ನಗರ ಪ್ರದೇಶಗಳಲ್ಲಿ 8ರಿಂದ 12ನೇ ತರಗತಿಗಳು ಭೌತಿಕವಾಗಿ (ಆಫ್ಲೈನ್) ಪುನರಾರಂಭಗೊಂಡರೆ, ಗ್ರಾಮೀಣ ಪ್ರದೇಶಗಳಲ್ಲಿ 5ರಿಂದ 12ನೇ ತರಗತಿವರೆಗೆ ಭೌತಿಕವಾಗಿ ಶಾಲೆಗಳು ಪುನರಾರಂಭಗೊಂಡವು.
ಹೂವು, ಶಾಲಾ ಬ್ಯಾಂಡ್, ಬಲೂನ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
‘ನಾವು ಶಾಲೆಗಳನ್ನು ಪುನರಾರಂಭಿಸಿದ್ದೇವೆ. ನಾವು ಮತ್ತೆ ಅವುಗಳನ್ನು ಮುಚ್ಚಲು ಬಿಡುವುದಿಲ್ಲ ಎನ್ನುವ ಆತ್ಮವಿಶ್ವಾಸದಿಂದ ಮುಂದುವರಿಯೋಣ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಹೇಳಿದ್ದಾರೆ.
ತರಗತಿಗಳ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಲು ಶಾಲಾ ಆಡಳಿತ ಮಂಡಳಿಗೆ ಸೂಚಿಸಿದ ಠಾಕ್ರೆ ಅವರು, ಶುದ್ಧ ಗಾಳಿ ಮತ್ತು ಪ್ರಕೃತಿಗೆ ಹತ್ತಿರವಾಗೋಣ ಎಂದು ಗುರುದೇವ ರವೀಂದ್ರನಾಥ ಠಾಗೋರ್ ಅವರ ಶಾಂತಿನಿಕೇತನದ ಉದಾಹರಣೆ ನೀಡಿದರು. ‘ನಾವು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ದೈಹಿಕ ಅಂತರವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂದೂ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.