ADVERTISEMENT

’ಸೆಂಟ್ರಲ್ ವಿಸ್ತಾ’ ಯೋಜನೆ: ಮೋದಿ ಸರ್ಕಾರದ ವಿರುದ್ಧ ಶಿವಸೇನಾ ವಾಗ್ದಾಳಿ

ಪಿಟಿಐ
Published 8 ಮೇ 2021, 8:04 IST
Last Updated 8 ಮೇ 2021, 8:04 IST
ಶಿವಸೇನಾ
ಶಿವಸೇನಾ   

ಮುಂಬೈ: ‘ಭಾರತಕ್ಕೆ ಕೋವಿಡ್ ವಿರುದ್ಧ ಹೋರಾಡಲು ಸಣ್ಣ–ಸಣ್ಣ ರಾಷ್ಟ್ರಗಳು ಕೂಡ ಸಹಾಯ ಹಸ್ತ ಚಾಚುತ್ತಿವೆ. ಆದರೂ, ಈ ಪಿಡುಗಿನ ಸಂದರ್ಭದಲ್ಲಿ ಬಹುಕೋಟಿ ವೆಚ್ಚದ ಸೆಂಟ್ರಲ್ ವಿಸ್ತಾ ಯೋಜನೆಯ ಕೆಲಸವನ್ನು ನಿಲ್ಲಿಸಲು ಮೋದಿ ಸರ್ಕಾರ ಸಿದ್ಧವಿಲ್ಲ’ ಎಂದು ಶಿವಸೇನಾ ಶನಿವಾರ ಟೀಕಿಸಿದೆ.

‘ಕಳೆದ 70 ವರ್ಷಗಳಲ್ಲಿ ಪ್ರಧಾನಿಗಳಾದ ಪಂಡಿತ್‌ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ಸೃಷ್ಟಿಸಿದ ವ್ಯವಸ್ಥೆಯು ಈಗ ಕೋವಿಡ್‌ ಪರಿಸ್ಥಿತಿಯನ್ನು ಎದುರಿಸಲು ನೆರವಾಗಿದೆ’ ಎಂದು ಪಕ್ಷ ಹೇಳಿದೆ.

’ಭಾರತದಲ್ಲಿ ಕೊರೊನಾ ವೈರಸ್‌ ತೀವ್ರಗತಿಯಲ್ಲಿ ಹರಡುತ್ತಿದೆ. ಹಾಗಾಗಿ ಭಾರತದಿಂದ ವಿಶ್ವಕ್ಕೆ ಬೆದರಿಕೆಯಿದೆ ಎಂದು ಯುನಿಸೆಫ್‌ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ಹೆಚ್ಚಿನ ರಾಷ್ಟ್ರಗಳು ಕೋವಿಡ್‌ ವಿರುದ್ಧ ಹೋರಾಡಲು ಭಾರತಕ್ಕೆ ನೆರವು ನೀಡಬೇಕು ಎಂದು ಮನವಿ ಮಾಡಿದೆ. ಬಾಂಗ್ಲಾದೇಶ 10 ಸಾವಿರ ರೆಮ್‌ಡಿಸಿವಿರ್‌ ಬಾಟಲಿಗಳನ್ನು ನೀಡಿದೆ. ಭೂತಾನ್‌ ವೈದ್ಯಕೀಯ ಆಮ್ಲಜನಕವನ್ನು ಕಳುಹಿಸಿದೆ. ನೇಪಾಳ,ಮ್ಯಾನ್ಮಾರ್‌, ಶ್ರೀಲಂಕಾ ಕೂಡ ‘ಆತ್ಮನಿರ್ಭರ’ ಭಾರತಕ್ಕೆ ಸಹಾಯ ಹಸ್ತ ಚಾಚಿದೆ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಹಲವು ಬಡರಾಷ್ಟ್ರಗಳು ಭಾರತಕ್ಕೆ ನೆರವು ನೀಡಲು ಮುಂದಾಗಿವೆ. ಈಗೀನ ಆಡಳಿತಗಾರರ ತಪ್ಪು ನೀತಿಗಳಿಂದಾಗಿ ಭಾರತವು ಆ ರೀತಿಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ’ ಎಂದು ಆರೋಪಿಸಲಾಗಿದೆ.

‘ಬಡರಾಷ್ಟ್ರಗಳು ತಮ್ಮದೇ ರೀತಿಯಲ್ಲಿ ಭಾರತಕ್ಕೆ ಸಹಾಯ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಮಾತ್ರ 20 ಸಾವಿರ ಕೋಟಿ ವೆಚ್ಚದಲ್ಲಿ ಮಹಾತ್ವಕಾಂಕ್ಷಿ ಯೋಜನೆ ಸೆಂಟ್ರಲ್‌ ವಿಸ್ತಾವನ್ನು ನಿಲ್ಲಿಸಲು ಸಿದ್ಧರಿಲ್ಲ. ಈ ಬಗ್ಗೆ ಯಾರಿಗೂ ವಿಷಾದವಿಲ್ಲ ಎಂಬುದು ನಿಜಕ್ಕೂ ಆಶ್ಚರ್ಯಕರ’ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.