ADVERTISEMENT

ಕೋವಿಡ್‌ ಬಾಧಿತರು ಅತಿಯಾದ ದೈಹಿಕ ಚಟುವಟಿಕೆಗಳಿಂದ ದೂರ ಇರುವುದು ಒಳಿತು: ಸಚಿವ

ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿದ್ದಾರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2023, 4:44 IST
Last Updated 31 ಅಕ್ಟೋಬರ್ 2023, 4:44 IST
ಮನ್‌ಸುಖ್‌ ಮಾಂಡವೀಯ
ಮನ್‌ಸುಖ್‌ ಮಾಂಡವೀಯ   

ನವದೆಹಲಿ: ಕೋವಿಡ್‌ನಿಂದ ತೀವ್ರ ಭಾದಿತರಾದವರು ಕೆಲಕಾಲ ಅತಿಯಾದ ದೈಹಿಕ ಚಟುವಟಿಕೆಯಿಂದ ಹಾಗೂ ಅತಿಯಾದ ವ್ಯಾಯಾಮಗಳಿಂದ ದೂರ ಇರುವುದು ಒಳಿತು. ಇದರಿಂದ ಹೃದಯಾಘಾತಗಳನ್ನು ತಪ್ಪಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿದ್ದಾರೆ.

‘ಕೋವಿಡ್‌ ಲಸಿಕೆಯಿಂದ ದೇಶದಲ್ಲಿ 18 ರಿಂದ 45 ವರ್ಷದ ವಯೋಮಾನದವರಲ್ಲಿ ಹಠಾತ್‌ ಸಾವಿನ ಅಪಾಯದ ಸಾಧ್ಯತೆ ಹೆಚ್ಚಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ (ಐಸಿಎಂಆರ್‌) ಅಧ್ಯಯನ ಹೇಳಿರುವುದಕ್ಕೆ ಪ್ರತಿಕ್ರಿಯೆಯಾಗಿ ಮಾಂಡವೀಯ ಅವರು ಗುಜರಾತ್‌ನ ಭಾವ್‌ನಗರದಲ್ಲಿ ಈ ಹೇಳಿಕೆ ನೀಡಿದ್ದಾರೆ

‘ಕೋವಿಡ್‌ನಿಂದ ಬಾಧಿತರಾಗಿದ್ದವರು ಕನಿಷ್ಠ ಒಂದೆರಡು ವರ್ಷ ಅತಿಯಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದಿತ್ತು. ಇದರಿಂದ ಹಠಾತ್ ಹೃದಯಾಘಾತ ಹಾಗೂ ಹೃದಯಸ್ತಂಭನ ತಪ್ಪಿಸಬಹುದಿತ್ತು’ ಎಂದು ಹೇಳಿದ್ದಾರೆ.

ADVERTISEMENT

ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದಕ್ಕೂ ಮೊದಲು ಅತಿಯಾದ ಕುಡಿತ ಹಾಗೂ ಅತಿಯಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇ ಅವರ ಸಾವಿಗೆ ಮೂಲ ಕಾರಣವಾಗಿದೆ ಎಂದು ಐಸಿಎಂಆರ್‌ ಅಧ್ಯಯನ ಹೇಳಿದೆ.

‘ಈ ಅಧ್ಯಯನದ ವರದಿಯು ಪರಿಶೀಲನೆಯಲ್ಲಿದ್ದು, ಇನ್ನಷ್ಟೆ ಪ್ರಕಟವಾಗಬೇಕಾಗಿದೆ. ಅಧ್ಯಯನ ಪ್ರಕ್ರಿಯೆಯು ಇದೇ ತಿಂಗಳು ಪೂರ್ಣಗೊಂಡಿದೆ’ ಎಂದು ಮೂಲಗಳು ತಿಳಿಸಿವೆ.

ಆರೋಗ್ಯವಂತ ಯುವಜನರ ಅಕಾಲಿಕ ಮರಣದ ವರದಿಗಳಿಂದಾಗಿ ಸಂಶೋಧಕರು ವಸ್ತುಸ್ಥಿತಿ ತನಿಖೆಗೆ ಮುಂದಾಗಿದ್ದರು. ಹಠಾತ್ ಸಾವುಗಳ ಕುರಿತು ಕಳವಳ ಕೇಳಿಬಂದಿದ್ದು, ಕೋವಿಡ್‌ ಲಸಿಕೆಯು ಕಾರಣ ಇರಬಹುದು ಎಂಬ ಶಂಕೆಯೂ ಮೂಡಿತ್ತು. 

ಆರೋಗ್ಯವಂತ ಯುವಜನರ ಹಠಾತ್‌ ಸಾವುಗಳಿಗೆ ಕಾರಣ ತಿಳಿಯಲು ಈ ಅಧ್ಯಯನ ನಡೆಸಲಾಗಿತ್ತು. 2021ರ ಅ.1 ಮತ್ತು 2023ರ ಮಾರ್ಚ್‌ 31ರ ನಡುವೆ ಸಂಭವಿಸಿದ್ದ 18ರಿಂದ 45 ವರ್ಷ ವಯೋಮಾನದ, ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ವ್ಯಕ್ತಿಗಳ ಅಕಾಲಿಕ ಸಾವಿನ ಪ್ರಕರಣಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿತ್ತು.

ವಯಸ್ಸು, ಲಿಂಗ, ಸ್ಥಳ ಕುರಿತ ಅಂಶಗಳ ಆಧಾರದಲ್ಲಿ 729 ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಾಗಿತ್ತು. ಮೃತರ ವೈದ್ಯಕೀಯ ಹಿನ್ನೆಲೆ, ವರ್ತನೆ (ಧೂಮಪಾನ, ಮದ್ಯಪಾನ, ಅತಿಯಾದ ದೈಹಿಕ ಶ್ರಮ), ಕೋವಿಡ್‌ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಹಾಗೂ ಅವರಿಗೆ ಕೋವಿಡ್‌ ಲಸಿಕೆ ನೀಡಲಾಗಿತ್ತೆ ಎಂಬ ವಿವರಗಳನ್ನು ಕಲೆಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.