ನವದೆಹಲಿ: ‘ಸ್ವಾತಂತ್ರ್ಯ ಹೋರಾಟಗಾರರ ಸ್ವತಂತ್ರ, ಸದೃಢ ಹಾಗೂ ಸಮರ್ಥ ಭಾರತದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ನನಸು ಮಾಡಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದರು.
ಕೋವಿಡ್–19 ದೃಢಪಟ್ಟಿದ್ದ ಶಾ ಅವರು ಗುಣಮುಖರಾಗಿ ಶುಕ್ರವಾರವಷ್ಟೇ ಮನೆಗೆ ಮರಳಿದ್ದರು. ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿ ಇರುವ ಅವರು,74ನೇ ಸ್ವಾತಂತ್ರ್ಯ ದಿನದಂದು ತಮ್ಮ ನಿವಾಸದಲ್ಲೇ ಧ್ವಜಾರೋಹಣ ಮಾಡಿದರು. ‘ಒಂದೆಡೆ ದೇಶದ ಬಡವರಿಗೆ ಹಾಗೂ ಸಮಾಜದಲ್ಲಿನ ದುರ್ಬಲ ವರ್ಗಕ್ಕೆ ಮನೆ ಹಾಗೂ ಆರೋಗ್ಯ ರಕ್ಷಣೆಯನ್ನು ಮೋದಿ ಸರ್ಕಾರ ನೀಡಿದ್ದು, ಜೊತೆಗೆ ಸದೃಢ ರಾಷ್ಟ್ರವಾಗಿ ಭಾರತ ಬೆಳೆದುನಿಂತಿದೆ. ಈ ಹೆಮ್ಮೆ ನಮಗೆಲ್ಲರಿಗೂ ಇದೆ’ ಎಂದು ಟ್ವೀಟ್ ಮೂಲಕ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಹಾಗೂ ದೇಶದ ಏಕತೆ, ರಕ್ಷಣೆಗಾಗಿ ಪ್ರಾಣ ಮುಡಿಪಿಟ್ಟವರಿಗೆ ನಮಿಸಿದ ಅವರು, ‘ಪ್ರಧಾನಿ ಮೋದಿ ಅವರ ‘ಆತ್ಮನಿರ್ಭರ ಭಾರತ’ದ ಕನಸನ್ನು ನನಸು ಮಾಡುವುದಕ್ಕೆ ಎಲ್ಲರೂ ಪ್ರತಿಜ್ಞೆ ಮಾಡಬೇಕು. ಜನರು ಸಾಧ್ಯವಾದಷ್ಟು ಭಾರತದಲ್ಲೇ ಉತ್ಪಾದನೆಯಾದ ವಸ್ತುಗಳನ್ನು ಖರೀದಿಸಬೇಕು’ ಎಂದು ಕರೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.