
ಶಶಿ ತರೂರ್
ತಿರುವನಂತಪುರ: ‘ಕೆಲವು ವಿಚಾರಗಳ ಕುರಿತ ನನ್ನ ನಿಲುವುಗಳು ಮಾಧ್ಯಮಗಳಿಗೆ ‘ಬಿಜೆಪಿ ಪರ’ ಎಂಬಂತೆ ಕಾಣಬಹುದು. ಆದರೆ ನಾನು ‘ಸರ್ಕಾರದ ಪರ’ ಅಥವಾ ‘ದೇಶದ ಪರ’ದ ನಿಲುವು ಇದು ಎಂದೇ ಪರಿಗಣಿಸುತ್ತೇನೆ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶುಕ್ರವಾರ ಹೇಳಿದರು.
‘ಈ ಹಿಂದೆಯೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದೆ. ದೇಶದ ಕುರಿತಂತೆ ಮಾತನಾಡಲು ಆದ್ಯತೆ ನೀಡುತ್ತೇನೆ, ರಾಜಕೀಯದ ಬಗ್ಗೆ ಮಾತನಾಡಲು ಇಷ್ಟವಿಲ್ಲ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ‘ಪಕ್ಷದ ಸದಸ್ಯರು ಪಕ್ಷದ ಗೆರೆಯನ್ನು ದಾಟಬಾರದು. ಸಂಸತ್ತಿನಲ್ಲಿ ಯಾವತ್ತೂ ಪಕ್ಷದ ಪರವಾಗಿ ನಿಂತಿದ್ದೇನೆ’ ಎಂದೂ ಹೇಳಿದರು.
‘ನಾನು ಕಾಂಗ್ರೆಸ್ನಲ್ಲಿಯೇ ಇರುತ್ತೇನೆ, ಎಲ್ಲಿಗೂ ಹೋಗುವುದಿಲ್ಲ. ಕೇರಳದ ಚುನಾವಣಾ ಪ್ರಚಾರದಲ್ಲೂ ಭಾಗಿಯಾಗುತ್ತೇನೆ. ಯುಡಿಎಫ್ ಜಯಕ್ಕಾಗಿ ಕೆಲಸ ಮಾಡುತ್ತೇನೆ’ ಎಂದರು.
ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತರೂರ್ ಅವರನ್ನು ಕೆಲವು ನಾಯಕರು ಸರಿಯಾಗಿ ನಡೆಸಿಕೊಂಡಿರಲಿಲ್ಲ. ಈ ಬೆನ್ನಲ್ಲೇ, ತರೂರ್ ಅವರು ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ‘ಎಲ್ಲವೂ ಸರಿಯಾಗಿದೆ’ ಎಂದು ಹೇಳಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರದ ಭಾರತ–ಪಾಕಿಸ್ತಾನ ಸಂಘರ್ಷದ ಬಗ್ಗೆ ತರೂರ್ ಅವರು ಕಳೆದ ವರ್ಷ ನೀಡಿದ್ದ ಹೇಳಿಕೆಯು ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷ ಮತ್ತು ಅವರ ಹೇಳಿಕೆ ನಡುವೆ ವೈರುಧ್ಯವಿತ್ತು. ಹಲವು ಕಾಂಗ್ರೆಸ್ ನಾಯಕರು ಅವರನ್ನು, ಅವರ ಉದ್ದೇಶವನ್ನು ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.