ನವದೆಹಲಿ: ಎನ್ಡಿಎ ವಿರುದ್ಧ ರಾಜಕೀಯ ಮೈತ್ರಿಕೂಟ ರಚಿಸುವ ಉದ್ದೇಶದೊಂದಿಗೆ ಶಿರೋಮಣಿ ಅಕಾಲಿದಳ ಪ್ರಾದೇಶಿಕ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದೆ. ತೃಣಮೂಲ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ ಮರುದಿನವೇ ಶಿರೋಮಣಿ ಅಕಾಲಿದಳ ನಿಯೋಗವು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆಗೂ ಮಾತುಕತೆ ನಡೆಸಿದ್ದಾರೆ.
‘ಚಳವಳಿಯ ಸಂದರ್ಭದಲ್ಲಿ ರೈತರಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಎರಡು ವಾರಗಳ ನಂತರ ದೆಹಲಿಯಲ್ಲಿ ನಡೆಯಲಿರುವ ಸಭೆಗೂ ಬರುವುದಾಗಿ ಅವರು ತಿಳಿಸಿದ್ದಾರೆ’ ಎಂದು ನಿಯೋಗ ತಿಳಿಸಿದೆ.
ಇದನ್ನೂ ಓದಿ:ಡಿ.8ರ ಭಾರತ್ ಬಂದ್ಗೆ ರಾಜ್ಯ ರೈತ ಸಂಘಗಳ ಬೆಂಬಲ
ಸಮಾನ ಮನಸ್ಕ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜತೆ ಸಮನ್ವಯ ಸಾಧಿಸುವ ಸಲುವಾಗಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರು ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ. ಇದರಲ್ಲಿ ಬಲ್ವಿಂದರ್ ಸಿಂಗ್ ಭುಂದುರ್, ಪ್ರೇಮ್ ಸಿಂಗ್ ಚಂದುಮಜ್ರಾ ಹಾಗೂ ಸಿಕಂದರ್ ಸಿಂಗ್ ಮಲುಕಾ ಇದ್ದಾರೆ.
‘ನಮ್ಮ ತಂತ್ರಗಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಮುಂದಿನ ವಾರ ದೆಹಲಿಯಲ್ಲಿ ಸಭೆ ಸೇರಲಿದ್ದೇವೆ. ಪ್ರಮುಖ ಮಸೂದೆಗಳನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸುವ ಮೊದಲು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹೊಸ ಕಾನೂನುಗಳಿಂದ ಕಾರ್ಪೊರೇಟ್ ವಲಯಕ್ಕೆ ನೆರವಾಗಲಿದೆ’ ಎಂದು ಪ್ರೇಮ್ ಸಿಂಗ್ ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಭಾಗವಾಗಿದ್ದ ಅಕಾಲಿ ದಳ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮೈತ್ರಿಕೂಟದಿಂದ ಹೊರಬಂದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.