ಮುಂಬೈ: ಮುಸ್ಲಿಮರಿಗೆ ಶಿಕ್ಷಣದಲ್ಲಿ ಶೇ.5 ಮೀಸಲಾತಿ ನೀಡುವ ತೀರ್ಮಾನಕ್ಕೆ ಶಿವಸೇನೆ ಬೆಂಬಲ ನೀಡಿದೆ. ಶಿವಸೇನೆಯ ಈ ನಿರ್ಧಾರವನ್ನು ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್ ಮುಸಲ್ಮಿನ್ (ಎಐಎಂಐಎಂ) ಧನಾತ್ಮಕ ನಡೆ ಎಂದು ಶ್ಲಾಘಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ, ಮರಾಠ ಸಮುದಾಯದವರ ಜತೆಗೆ ಧಂಗ್ರಾ, ಮುಸ್ಲಿಂ ಮತ್ತು ಇತರ ಸಮುದಾಯದವರಿಗೂ ಮೀಸಲಾತಿ ನೀಡಬೇಕೆಂದು ಹೇಳಿದ್ದಾರೆ.ಅದೇ ವೇಳೆ ಮುಸ್ಲಿಮರಿಗೆ ಮೀಸಲಾತಿ ನಿರಾಕರಿಸುವ ಮೂಲಕ ಫಡಣವಿಸ್ ಸರ್ಕಾರ ಬಾಂಬೆ ಹೈಕೋರ್ಟ್ ತೀರ್ಮಾನವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ಮುಸ್ಲಿಂ ಸಮುದಾಯದವರಿಗೆ ಮೀಸಲಾತಿ ನೀಡುವ ಬಗ್ಗೆ ಮಾತನಾಡಿದ ಠಾಕ್ರೆ, ಮುಸ್ಲಿಂ ಸಮುದಾಯದಿಂದ ಬೇಡಿಕೆ ಬಂದರೆ ಅದನ್ನು ಪರಿಗಣಿಸಬೇಕು ಎಂದಿದ್ದಾರೆ.
ಶಿವಸೇನೆಯ ಈ ನಿಲುವಿಗೆ ಖುಷಿ ವ್ಯಕ್ತ ಪಡಿಸಿದ ಎಐಎಂಐಎಂ ಶಾಸಕ ಇಮ್ತಿಯಾದ್ ಜಲೀಲ್, ಇದೊಂದು ಧನಾತ್ಮಕ ನಡೆ.ಬಿಜೆಪಿ ಇದರಿಂದ ಕಲಿಯಬೇಕಿದೆ.ಬಿಜೆಪಿಯ ಕೆಲವರು ತಮ್ಮ ಮಾತು ಮತ್ತು ಕಾರ್ಯಗಳಿಂದ ಮುಸ್ಲಿಮರ ವಿರುದ್ಧ ಕಿಡಿ ಕಾರುತ್ತಾರೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.