ಮುಂಬೈ: ‘ಮಹಾವಿಕಾಸ ಆಘಾಡಿ’ಯಿಂದ ಹೊರಬರದೇ, ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಶಿವಸೇನಾದ(ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ಶನಿವಾರ ಸುಳಿವು ನೀಡಿದ್ದಾರೆ.
‘ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಗಿಂತ ಹೆಚ್ಚು ಆಕಾಂಕ್ಷಿಗಳು ಇರುವುದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಉದ್ಧವ್ ಠಾಕ್ರೆ ಮತ್ತು ಇತರ ಪಕ್ಷದ ನಾಯಕರು ಮಾತುಕತೆ ನಡೆಸುತ್ತಿದ್ದಾರೆ’ ಎಂದು ರಾವುತ್ ಸುದ್ದಿಗಾರರಿಗೆ ಹೇಳಿದ್ದಾರೆ.
‘ಮುಂಬೈನಲ್ಲಿ ನಮ್ಮ ಗೆಲುವಿನ ಅಗತ್ಯವಿದೆ. ಇಲ್ಲದಿದ್ದರೆ ಮುಂಬೈ ನಗರ ಮಹಾರಾಷ್ಟ್ರದಿಂದ ಪ್ರತ್ಯೇಕವಾಗಲಿದೆ’ ಎಂದು ಹೇಳಿದ್ದಾರೆ.
‘ಬಿಜೆಪಿಯೊಂದಿಗಿದ್ದ ಅವಿಭಜಿತ ಶಿವಸೇನಾವು ಬಿಎಂಸಿ ಮತ್ತು ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿತ್ತು. ಪುಣೆ, ಪಿಂಪ್ರಿ, ಚಿಂಚವಾಡ ಮತ್ತು ನಾಸಿಕ್ ಸ್ಥಳೀಯಾಡಳಿತದಲ್ಲಿ ‘ಎಂವಿಎ’ ಮೈತ್ರಿ ಇರಲಿದೆ’ ಎಂದರು.
ಮುಂಬೈ ಪಾಲಿಕೆಯು 1997ರಿಂದ 2022ರವರೆಗೆ ಅವಿಭಜಿತ ಶಿವಸೇನಾದ ಆಡಳಿತದಲ್ಲಿತ್ತು.
ಬಿಎಂಸಿ ಚುನಾವಣೆಯಲ್ಲಿ 227 ವಾರ್ಡ್ಗಳಲ್ಲೂ ಮಹಾಯುತಿ ಮೈತ್ರಿಕೂಟ ಸ್ಪರ್ಧಿಸುವುದಾಗಿ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಕಳೆದ ವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.